ಹೊಳೆಹೊನ್ನೂರು: ಸಮೀಪದ ಅರಹತೊಳಲು ಕೈಮರದ ವ್ಯಕ್ತಿಯೊಬ್ಬರು ಗುರುವಾರ ರಾತ್ರಿ ಶಿವಮೊಗ್ಗದ ಬಿ.ಎಚ್ ರಸ್ತೆಯ ಹಳೆಯ ತುಂಗಾ ಸೇತುವೆ ಮೇಲಿಂದ ನದಿಗೆ ಹಾರಿದ್ದು, ಎಎಸ್ಐ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕುಟುಂಬ ಕಲಹದಿಂದ ಮನನೊಂದ ಮಂಜುನಾಥ್ ಗೌಂಡರ್ ಮದ್ಯದ ಅಮಲಿನಲ್ಲಿ ನದಿಗೆ ಹಾರಿದ್ದರು. ಆಗ ಸಮೀಪದಲ್ಲೇ ಇದ್ದಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಎಎಸ್ಐ ಶ್ರೀನಿವಾಸ್ ಸಮಯಪ್ರಜ್ಞೆ ಮೆರೆದರು. ತಕ್ಷಣ ಅಲ್ಲಿಯೇ ಇದ್ದ ಆಟೊ ಚಾಲಕರಾದ ಅರ್ಜುನ್ ಹಾಗೂ ಕಾಂತ ಎಂಬುವವರ ನೆರವು ಪಡೆದು ನದಿಯಲ್ಲಿ ಮುಳುಗುತ್ತಿದ್ದ ಮಂಜುನಾಥನನ್ನು ರಕ್ಷಿಸಿದ್ದಾರೆ.
ಮೇಲಿಂದ ಬಿದ್ದ ರಭಸಕ್ಕೆ ಕಲ್ಲಿನ ಏಟು ಬಿದ್ದು ಮಂಜುನಾಥ ಅವರ ಸೊಂಟ ಮುರಿದಿದ್ದು, ಸದ್ಯ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕರ್ತವ್ಯದ ಅವಧಿ ಅಲ್ಲದಿದ್ದರೂ ವ್ಯಕ್ತಿಯ ರಕ್ಷಣೆ ಮಾಡಿದ ಎಎಸ್ಐ ಶ್ರೀನಿವಾಸ್ ಹಾಗೂ ಆಟೊ ಚಾಲಕರಾದ ಅರ್ಜುನ್ ಹಾಗೂ ಕಾಂತ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.