ರಿಪ್ಪನ್ಪೇಟೆ: ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಗೆ ಗ್ರಾಸವಾಗಿರುವ ಬಿಟ್ ಕಾಯಿನ್ ಹಗರಣ ವಿರೋಧ ಪಕ್ಷಗಳ ಪಿತೂರಿಯಾಗಿದ್ದು, ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಟ್ ಕಾಯಿನ್ ಹ್ಯಾಕರ್ ಶ್ರೀಕೃಷ್ಣ ಚತುರ ಮಾತುಗಾರ. ಆತನ ಜಾಣ್ಮೆಗೆ ಮಾರುಹೋಗಿ ಹಲವರು ಹಣ ತೊಡಗಿಸಿರುವುದು ನಿಜ. ಇದರಲ್ಲಿ ಕಾಂಗ್ರೆಸ್ನ ಹಲವು ಪ್ರಭಾವಿಗಳೂ ಇದ್ದಾರೆ. ಸುಳ್ಳನ್ನೇ ಸತ್ಯ ಎಂದು ಸೃಷ್ಟಿಸುವಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು’ ಎಂದು ದೂರಿದರು.
ರಾಜ್ಯ ಸರ್ಕಾರ ಪಾರದರ್ಶಕ, ಜನಪರ ಕಾಳಜಿಯೊಂದಿಗೆ ಉತ್ತಮ ಆಡಳಿತ ನೀಡುತ್ತಿದೆ. ಸರ್ಕಾರಕ್ಕೆ ಇರುಸು ಮುರುಸು ಮಾಡುವಂತದ ಯಾವುದೇ ಅಸ್ತ್ರ ವಿರೋಧಿಗಳ ಬಳಿ ಇಲ್ಲ. ಹಾಗಾಗಿ, ಬಿಟ್ ಕಾಯಿನ್ ಎಂಬ ಮಾಯಾಮೃಗದ ಬೆನ್ನು ಬಿದ್ದಿದ್ದಾರೆ ಎಂದು ಟೀಕಿಸಿದರು.
ಹಗರಣದ ಸಮಗ್ರ ತನಿಖೆಯಲ್ಲಿ ಸರ್ಕಾರ ಯಾವುದೇ ಲೋಪವೆಸಗಿಲ್ಲ. ಇದು ವಿರೋಧಿಗಳ ಕಟ್ಟು ಕತೆಯ ಮೇಲೆ ನಿಂತಿದೆ ಎಂದು ಹೇಳಿದರು.