ಶಿವಮೊಗ್ಗ: ಬಿಜೆಪಿ ಎಲ್ಲ ಮೋರ್ಚಾಗಳ ಪದಾಧಿಕಾರಿಗಳು ಪಕ್ಷದ ವಿಚಾರ ಮತ್ತು ಸಿದ್ಧಾಂತ, ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕು. ಕಾರ್ಯರ್ತರನ್ನು ಸಜ್ಜುಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗ, ರೈತ, ಅಲ್ಪಸಂಖ್ಯಾತ, ಮಹಿಳಾ, ಎಸ್ಸಿ, ಎಸ್ಟಿ ಮೋರ್ಚಾ ಪದಾಧಿಕಾರಿಗಳ ಘೋಷಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ಪಟ್ಟ ಶಾಶ್ವತವಲ್ಲ. ಬಿಜೆಪಿಯ ಶಾಶ್ವತ ಕಾರ್ಯಕರ್ತನಾಗಿರುವುದೇ ಅತ್ಯಂತ ಖುಷಿಯ ಸಂಗತಿ ಎಂದು ಅಟಲ್ಬಿಹಾರಿ ವಾಜಪೇಯಿ ಹೇಳಿದ್ದರು. ಪ್ರತಿಯೊಬ್ಬ ಕಾರ್ಯಕರ್ತರು ಅಂತಹ ಮನೋಭಾವ ಇಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲೆಯ, ರಾಜ್ಯದ, ರಾಷ್ಟ್ರದ ಸಮಸ್ಯೆಗಳಿಗೆ ಕಾರ್ಯಕರ್ತರು ಸ್ಪಂದಿಸಬೇಕು. ಪ್ರಕೃತಿ ವಿಕೋಪ, ಅವಘಡಗಳ ಸಮಯದಲ್ಲಿ ಸಂತ್ರಸ್ತರಾಗುವ ಕುಟುಂಬಗಳನ್ನು ತಮ್ಮವರು ಎಂದು ಪರಿಗಣಿಸಬೇಕು. ಬೆಂಗಳೂರು ಘಟನೆಯ ಸಂತ್ರಸ್ತರ ನೆರವಿಗೆ ಸಹಾಯ ಹಸ್ತ ಚಾಚಬೇಕು. ಮೋರ್ಚಾಗಳ ಕಾರ್ಯಕರ್ತರು ಇಂತಹ ಸಮಯದಲ್ಲಿ ಮಂಚೂಣಿಯಲ್ಲಿರಬೇಕು.ಜನರು ಮಾಡಿದ ಸಹಾಯ ಸದಾ ನೆನಪಿಟ್ಟುಕೊಳ್ಳುತ್ತಾರೆ.ಸಂಕಷ್ಟಕ್ಕೆ ಸ್ಪಂದಿಸುವ ಮನೋಭಾವ ಸ್ಮರಿಸುತ್ತಾರೆ. ಅಂಥವರು ಪಕ್ಷದಲ್ಲಿ ನಾಯಕರಾಗಿ ಬೆಳೆಯಬಹುದು. ಪಕ್ಷಕ್ಕೂ ಉತ್ತಮ ಹೆಸರು ಬರುತ್ತದೆಎಂದರು.
ಮೇಯರ್ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಪಾಲಿಕೆ ಸದಸ್ಯರಾದ ಎಸ್.ಎನ್.ಚನ್ನಬಸಪ್ಪ, ಎಸ್.ಜ್ಞಾನೇಶ್ವರ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಜಗದೀಶ್ ಉಪಸ್ಥಿತರಿದ್ದರು.