ಶಿವಮೊಗ್ಗ: ಕರ್ನಾಟಕ ಹಾಲು ಒಕ್ಕೂಟದ ಮೂಲಕ ಜಿಲ್ಲೆಯಲ್ಲೂ ಸಣ್ಣ ಮತ್ತು ಅತಿ ಸಣ್ಣ ರೈತರು ಬೆಳೆದ ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಮೇ 13ರಿಂದ ಆರಂಭವಾಗಲಿದೆ.
ಕೊರೊನಾ ನಿರ್ಬಂಧಗಳ ಕಾರಣ ರೈತರು ಸಂಕಷ್ಟದಲ್ಲಿ ಇದ್ದಾರೆ. ಮೆಕ್ಕೆಜೋಳದ ಬೆಲೆಯೂ ಕುಸಿದಿದೆ. ಹಾಗಾಗಿ, ಕ್ವಿಂಟಾಲ್ಗೆ ₹1,760 ದರದಲ್ಲಿ ಜಿಲ್ಲೆಯ ರೈತರಿಂದ 8 ಸಾವಿರ ಟನ್ ಖರೀದಿಸಲಾಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ರೈತರ ನೆರವಿಗೆ ಮುಂದಾಗಿರುವ ರಾಜ್ಯ ಸರ್ಕಾರ ಕೆಎಂಎಫ್ ಅಧ್ಯಕ್ಷಬಾಲಚಂದ್ರಜಾರಕಿಹೊಳಿ ಅವರ ಜೊತೆ ಚರ್ಚಿಸಿದೆ.ಪಶು ಆಹಾರ ಘಟಕಗಳಿಗೆ22 ಸಾವಿರ ಟನ್ ಮೆಕ್ಕೆಜೋಳ ಖರೀದಿಸಲು ಒಪ್ಪಿಸಿದೆ.ರಾಜ್ಯದಲ್ಲಿ ಈ ಬಾರಿ 13.14 ಲಕ್ಷ ಹೆಕ್ಟೇರ್ನಲ್ಲಿ 43.97 ಲಕ್ಷ ಟನ್ ಮೆಕ್ಕೆಜೋಳ ಬೆಳೆಯಲಾಗಿದೆ. ಜಿಲ್ಲೆಯಲ್ಲೂ 57,105 ಹೆಕ್ಟೇರ್ನಲ್ಲಿ 2.78 ಲಕ್ಷ ಟನ್ ಬೆಳೆಯಲಾಗಿದೆ. ಈಗಾಗಲೇ ಬಹುತೇಕ ರೈತರು ಮಾರಾಟ ಮಾಡಿದ್ದಾರೆ. ಇರುವ ಸಂಗ್ರಹ ಲೆಕ್ಕಹಾಕಿ ಕೆಎಂಎಫ್ಗೆ ಅಗತ್ಯ ಇರುವಷ್ಟು ಖರೀದಿ ಮಾಡಲಾಗುತ್ತಿದೆ ಎಂದು ವಿವರ ನೀಡಿದರು.
ಶಿಮುಲ್ ವ್ಯಾಪ್ತಿಯ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಲ್ಲಿ 1250 ಸೊಸೈಟಿಗಳಿವೆ. ಎಲ್ಲ ಸೊಸೈಟಿಗಳ ಮೂಲಕ ಪಶುಗಳಿಗೆ ಆಹಾರ ಪೂರೈಸಲಾಗುವುದು. ಪ್ರತಿ ರೈತರಿಂದ ಗರಿಷ್ಠ 50 ಕ್ವಿಂಟಲ್ ಖರೀದಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮೇಘರಾಜ್, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಎಸ್.ದತ್ತಾತ್ರಿ ಉಪಸ್ಥಿತರಿದ್ದರು.