ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರದಲ್ಲಿ ಹೆಚ್ಚುತ್ತಿರುವ ಡೆಂಗಿ ಪ್ರಕರಣ‌

ರಾಮನಗರ ಬಡಾವಣೆಯಲ್ಲಿ ಸ್ವಚ್ಛತೆ ಮರೀಚಿಕೆ: ನಿವಾಸಿಗಳ ಆರೋಪ
Last Updated 12 ಏಪ್ರಿಲ್ 2021, 6:37 IST
ಅಕ್ಷರ ಗಾತ್ರ

ಸಾಗರ: ಕೊರೊನಾ ಸೋಂಕಿನ ಎರಡನೇ ಅಲೆ ಹರಡುವ ಭೀತಿಯ ನಡುವೆ ನಗರವ್ಯಾಪ್ತಿಯಲ್ಲಿ ಡೆಂಗಿ ಪ್ರಕರಣಗಳು ಹೆಚ್ಚುತ್ತಿವೆ. 15 ದಿನಗಳ ಅವಧಿಯಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ರಾಮನಗರ ಬಡಾವಣೆಯಲ್ಲೇ ಡೆಂಗಿಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿರುವುದು ಬೆಳಕಿಗೆ ಬಂದಿದೆ.

ಜ್ವರ, ಕಣ್ಣಿನ ಗುಡ್ಡೆಯ ಹಿಂದೆ ನೋವು, ತಲೆನೋವು, ಶೀತ ಕಾಣಿಸಿಕೊಂಡು ಕ್ರಮೇಣ ರಕ್ತದಲ್ಲಿ ಪ್ಲೇಟ್‌ಲೆಟ್ ಅಂಶ ಕಡಿಮೆಯಾಗುವುದು ಡೆಂಗಿ ಜ್ವರದ ಲಕ್ಷಣ. ಮನೆಯ ಸುತ್ತಮುತ್ತ ಇರುವ ತ್ಯಾಜ್ಯಗಳಲ್ಲಿ ಸಂಗ್ರಹವಾಗುವ ನೀರಿನಿಂದ ಉತ್ಪತ್ತಿಯಾಗುವ ಸೊಳ್ಳೆಗಳು ಕಚ್ಚಿದರೆ ಡೆಂಗಿ ಬರುತ್ತದೆ ಎನ್ನುತ್ತಾರೆ ತಾಲ್ಲೂಕು ವೈದ್ಯಾಧಿಕಾರಿ ಡಾ.ಕೆ.ಎಸ್. ಮೋಹನ್.

ರಾಮನಗರ ಬಡಾವಣೆ ನಗರದ ಹೊರ ವಲಯದಲ್ಲಿದ್ದು, ಸ್ವಚ್ಛತೆ ಕೊರತೆ ಕಾರಣಕ್ಕೆ ಇಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚುತ್ತಿವೆ ಎನ್ನುವ ದೂರುಗಳಿವೆ. ಕಳೆದ ತಿಂಗಳು ಸುರಿದ ಅಕಾಲಿಕ ಮಳೆಯಿಂದ ಚರಂಡಿ ಹಾಗೂ ಕಸದ ರಾಶಿಯಲ್ಲಿ ನೀರು ನಿಲ್ಲುವುದು ಹೆಚ್ಚಾಗಿದ್ದು, ಸೊಳ್ಳೆಯ ಉತ್ಪತ್ತಿ ಅಧಿಕಗೊಳ್ಳಲು ಕಾರಣವಾಗಿದೆ ಎಂದು ಸ್ಥಳೀಯರು ದೂರುತ್ತಾರೆ.

ಕೊರೊನಾ ಹಾಗೂ ಡೆಂಗಿ ಜ್ವರದ ಲಕ್ಷಣಗಳಲ್ಲಿ ಹೋಲಿಕೆ ಇರುವುದರಿಂದ ಜ್ವರ, ಶೀತ, ಮೈ ಕೈ ನೋವು ಕಾಣಿಸಿಕೊಂಡಾಗ ರೋಗಿಯನ್ನು ಕೇವಲ ಕೊರೊನಾ ದೃಷ್ಟಿಯಿಂದ ನೋಡದೆ ಡೆಂಗಿ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ ಎನ್ನುತ್ತಾರೆ ಇಲ್ಲಿನ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯರು.

ಮುಖ್ಯವಾಗಿ ಮನೆಯ ಹಿಂಭಾಗದಲ್ಲಿ, ಮುಂಭಾಗದಲ್ಲಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಹೂವಿನ ಕುಂಡ, ತೆಂಗಿನ ಚಿಪ್ಪು, ಖಾಲಿ ಬಾಟಲ್‌ಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು ಎಂಬ ಸಲಹೆಯನ್ನು ಆರೋಗ್ಯ ಇಲಾಖೆ ನೀಡುತ್ತಿದೆ. ಅದೇ ರೀತಿ ನೀರು ಸಂಗ್ರಹದ ತೊಟ್ಟಿಯನ್ನು ಆಗಾಗ ಶುದ್ಧೀಕರಣ ಮಾಡಬೇಕು ಎಂಬ ಸೂಚನೆ ನೀಡಲಾಗುತ್ತಿದೆ.

ರಾಮನಗರ ಬಡಾವಣೆಯಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಮೂವರು ಡೆಂಗಿ ಜ್ವರದಿಂದ ಬಳಲುತ್ತಿದ್ದು, ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುಟುಂಬದ ಮುಖ್ಯಸ್ಥರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ನಗರವ್ಯಾಪ್ತಿಯಲ್ಲಿ ಡೆಂಗಿ ಜ್ವರ ಹರಡುತ್ತಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದು, ಸೊಳ್ಳೆಗಳ ನಿಯಂತ್ರಣಕ್ಕೆ ನಗರಸಭೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT