ಶಿವಮೊಗ್ಗ: ಬಾಲ್ಯವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ11 ಜನರ ವಿರುದ್ಧ ಇಲ್ಲಿನ ತುಂಗಾ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಮದುವೆಯಾಗಿದ್ದ ಬಾಲಕಿಯನ್ನು ರಕ್ಷಿಸಿ ಬಾಲಮಂದಿರಕ್ಕೆ ಸೇರಿಸಲಾಗಿದೆ.
ಬಾಲಕಿಯನ್ನು ಪ್ರೀತಿಸಿ ಮದುವೆಯಾಗಿದ್ದ ಯುವಕ, ಮದುವೆ ಮಾಡಿಸಿಕೊಟ್ಟ ಅರ್ಚಕ, ಅಡುಗೆ ಸಿದ್ಧಪಡಿಸಿದ್ದ ವ್ಯಕ್ತಿ, ಲಗ್ನಪತ್ರಿಕೆ ಮುದ್ರಕ, ಛಾಯಾಗ್ರಾಹಕರು ಹಾಗೂ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ಸ್ನೇಹಿತರು, ಸಂಬಂಧಿಗಳ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಎರಡು ವರ್ಷಗಳ ಹಿಂದೆ ಗೃಹಪ್ರವೇಶ ಸಮಾರಂಭದಲ್ಲಿ ಬಾಲಕಿಯನ್ನು ದೂರದ ಸಂಬಂಧಿ ಸಂತೋಷ್ ಪರಿಚಯ ಮಾಡಿಕೊಂಡಿದ್ದ. ನಂತರ ಇಬ್ಬರ ನಡುವೆ ಪ್ರೀತಿ ಅಂಕುರಿಸಿತ್ತು. ವಿಷಯ ತಿಳಿದ ಮನೆಯವರು ಮದುವೆ ಮಾತುಕತೆಯನ್ನೂ ನಡೆಸಿದ್ದರು. ಜುಲೈ 31ರಂದು ದೇವಸ್ಥಾನವೊಂದರಲ್ಲಿ ಮದುವೆಯಾಗಿತ್ತು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಮದುವೆ ವಿಚಾರ ತಿಳಿದಿದ್ದರಿಂದ ಬಾಲಕಿ ಹಾಗೂ ವರನ ಪಾಲಕರ ವಿರುದ್ಧ ದೂರು ದಾಖಲಿಸಿ, ಬಾಲಕಿಯನ್ನು ರಕ್ಷಿಸಿದ್ದಾರೆ.