ಶಿವಮೊಗ್ಗ: ದಸರಾ ಮಹೋತ್ಸವ ಅಂಗವಾಗಿ ಶನಿವಾರ ಮಹಾನಗರ ಪಾಲಿಕೆ ಹಮ್ಮಿಕೊಂಡಿದ್ದ ಮಕ್ಕಳ ದಸರಾ ಕಾರ್ಯಕ್ರಮವನ್ನು ಇಲ್ಲಿನ ಶಾರದಾದೇವಿ ಅಂಧರ ವಿಕಾಸ ಕೇಂದ್ರದ ಮಕ್ಕಳು ಉದ್ಘಾಟಿಸಿದರು.
ಪಾಲಿಕೆ ವತಿಯಿಂದ ನಾಡಹಬ್ಬ ದಸರಾ ಸಂಭ್ರಮದಿಂದ ನಡೆಯುತ್ತಿದೆ. ದಸರಾ ಅಂಗವಾಗಿ ಬೆಳಿಗ್ಗೆ ನಗರದ 7 ಕ್ಲಸ್ಟರ್ ವಿಭಾಗದಿಂದ ‘ದಸರಾ ನಡಿಗೆ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಫ್ರೀಡಂ ಪಾರ್ಕ್ನಲ್ಲಿ ಮಕ್ಕಳ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮಕ್ಕಳಿಗಾಗಿ ವಿಶೇಷ ಆಟೋಟ ಸ್ಪರ್ಧೆಗಳು ನಡೆದವು. ಸಹ ಚೇತನ ತಂಡದವರಿಂದ ದೇಶ ಭಕ್ತಿ ಗೀತೆಗೆ ನೃತ್ಯ ನಡೆಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಮೇಯರ್ ಸುನಿತಾ ಅಣ್ಣಪ್ಪ, ‘ಕಳೆದ ಬಾರಿ ಕೊರೊನಾ ಕಾರಣ ದಸರಾ ಮಹೋತ್ಸವ ಕೇವಲ ಆಚರಣೆಗಷ್ಟೇ ಸೀಮಿತವಾಗಿತ್ತು. ಈ ಬಾರಿ ಮಕ್ಕಳು ದಸರಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವುದು ದಸರಾದ ಮೆರುಗು ಹೆಚ್ಚಿಸಿದೆ’ ಎಂದರು.
ಕಾರ್ಯಕ್ರಮದಲ್ಲಿ ಉಪಮೇಯರ್ ಶಂಕರ್ ಗನ್ನಿ, ಮಕ್ಕಳ ದಸರಾ ಸಮಿತಿಯ ಅಧ್ಯಕ್ಷೆ ಆರತಿ ಆ.ಮ. ಪ್ರಕಾಶ್, ಸದಸ್ಯರಾದ ಎಸ್.ಎನ್. ಚನ್ನಬಸಪ್ಪ, ಸುರೇಖಾ ಮುರುಳಿಧರ್, ಆಶಾ ಚಂದ್ರಪ್ಪ, ರೇಖಾ ರಂಗನಾಥ್, ಸಂಗೀತಾ ನಾಗರಾಜ್, ಸುವರ್ಣ ಶಂಕರ್, ದುರ್ಗಿಗುಡಿ ಶಾಲೆಯ ಮುಖ್ಯಶಿಕ್ಷಕ ಮೋಹನ್, ಪ್ರಾಂಶುಪಾಲ ಹಳ್ಳೂರು ಇದ್ದರು.