ಸೊರಬ: ಪ್ರಜೆಗಳು ಪ್ರಜಾಪ್ರಭುತ್ವದಲ್ಲಿ ನಿರ್ಣಾಯಕರಾಗಿದ್ದು, ಜನ ಬೆಂಬಲದಿಂದ ಆಯ್ಕೆಗೊಂಡವರು ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಇಚ್ಛಾಶಕ್ತಿ ತೋರಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ತಾಲ್ಲೂಕಿನ ಚಂದ್ರಗುತ್ತಿಯಲ್ಲಿ ರೇಣುಕಾಂಬಾ ದಸರಾ ಉತ್ಸವ ಸಮಿತಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ 6ನೇ ದಿನದ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಮಾಜದ ಬದಲಾವಣೆ ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆ ಚುರುಕುಗೊಳ್ಳಬೇಕಾದರೆ ಹೋರಾಟವೂ ಒಂದು ಭಾಗವಾಗಿ ರುತ್ತದೆ. ಸಮಾಜವಾದಿ ಲೋಹಿಯಾ ಅವರ ತತ್ವದ ಅಡಿಯಲ್ಲಿ ಜನಸೇವೆಯ ಅಗತ್ಯವಿದೆ ಎಂದರು.
ತಮ್ಮ ಅಧಿಕಾರಾವಧಿಯಲ್ಲಿ ಗೇಣಿದಾರರ ಪರವಾಗಿ ರೈತರನ್ನು ಭೂ ಒಡೆಯರನ್ನಾಗಿಸುವ ಉದ್ದೇಶದಿಂದ ಕಾನೂನು ರೂಪಿಸಲಾಯಿತು. ಆದರೆ ಕೆಲವು ತಾಲ್ಲೂಕುಗಳಲ್ಲಿ ಅಲ್ಲಿನ ಶಾಸಕರ ನಿರಾಸಕ್ತಿಯಿಂದ ಪೂರ್ಣಪ್ರಮಾಣದಲ್ಲಿ ಫಲಪ್ರದಗೊಳ್ಳದಿರುವುದು ಬೇಸರ ತಂದಿದೆ. ಹಕ್ಕುಗಳನ್ನು ಪಡೆಯಲು ಹಿಂಜರಿಯದೇ ತಮ್ಮ ಸ್ಥಾನಮಾನ ಪಡೆಯುವ ನಿಟ್ಟಿನಲ್ಲಿ ಜಾಗೃತಿ ಹೊಂದಬೇಕು ಎಂದು ಸಲಹೆ ನೀಡಿದರು.
ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಮಾತನಾಡಿ, ‘ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಹಾಗೂ ಕಾಗೋಡು ತಿಮ್ಮಪ್ಪ ಅವರು ಹಿಂದುಳಿದ ವರ್ಗದ ಜನರ ಆಶಾಕಿರಣವಾಗಿದ್ದು, ಚಂದ್ರಗುತ್ತಿ ಕ್ಷೇತ್ರದ ಅಭಿವೃದ್ಧಿಗೆ ತಿಮ್ಮಪ್ಪ ಅವರ ಕೊಡುಗೆ ಅಪಾರ ಎಂದರು.
ದಸರಾ ಉತ್ಸವ ಸಮಿತಿ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜನಸಂಗ್ರಾಮ ಪರಿಷತ್ ಅಧ್ಯಕ್ಷ ಶಂಕರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ರತ್ನಾಕರ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜೆ.ಶಿವಾನಂದಪ್ಪ, ರೇಣುಕಪ್ರಸಾದ್, ನಾಗರಾಜ್, ಮಂಜಣ್ಣ, ಮುಕ್ತಾರ್ ಅಹಮದ್, ರಾಮಣ್ಣ ಸ್ವಾದಿ, ಪ್ರಜ್ವಲ್, ಯಶವಂತ ಇದ್ದರು.