ಶಿವಮೊಗ್ಗ: ತೀರ್ಥಹಳ್ಳಿ ಸಮೀಪದ ರಂಜದಕಟ್ಟೆ ಬಳಿ ಶತಮಾನದಷ್ಟು ಹಳೆಯದಾದ ಕಿರು ಸೇತುವೆ ಕುಸಿದಿದ್ದು, ಆಗುಂಬೆ–ಉಡುಪಿ, ಶೃಂಗೇರಿ–ಮಂಗಳೂರು ಮಾರ್ಗದ ಸಂಚಾರ ಬಂದ್ ಆಗಿದೆ.
ಸುಟ್ಟ ಇಟ್ಟಿಗೆಯಿಂದಲೇ ಕಟ್ಟಲಾಗಿದ್ದ ಈ ಸೇತುವೆ ಈಚೆಗೆ ಸುರಿದ ಭಾರಿ ಮಳೆಗೆ ಶಿಥಿಲಗೊಂಡಿತ್ತು. ಸ್ಥಳೀಯರು ದೂರು ನೀಡಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದುರಸ್ತಿಗೆ ಕ್ರಮ ಕೈಗೊಂಡಿರಲಿಲ್ಲ. ಗುರುವಾರ ಸೇತುವೆಯ ಮಧ್ಯ ಭಾಗ ಕುಸಿದಿದೆ. ಹಾಗಾಗಿ, ರಾಷ್ಟ್ರೀಯ ಹೆದ್ದಾರಿ–169ರ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.
ಆಗುಂಬೆಯಿಂದ ತೀರ್ಥಹಳ್ಳಿಗೆ ಸಂಚರಿಸುವ ವಾಹನಗಳು ಬಿಳುಕೊಪ್ಪ, ಸಾಥ್ ಗೋಡು, ಬೊಬ್ಬಿ ರಸ್ತೆ ಮೂಲಕ ಸಾಗರ ರಸ್ತೆ ತಲುಪಿ, ಅಲ್ಲಿಂದ ತೀರ್ಥಹಳ್ಳಿಗೆ, ತೀರ್ಥಹಳ್ಳಿಯಿಂದ ಆಗುಂಬೆಗೆ ಸಂಚರಿಸು ವಾಹನಗಳು ಕವಲೇದುರ್ಗ, ಕೊಂಡ್ಲೂರು ಮೂಲಕ ಸಾಥ್ ಗೋಡು, ಬಿಳಲಕೊಪ್ಪ ಮೂಲಕ ಸಂಚರಿಸಲು ಸೂಚಿಸಲಾಗಿದೆ.
‘ಸೇತುವೆ ದುರ್ಬಲವಾಗಿದ್ದ ಕಾರಣ ಪಕ್ಕದಲ್ಲೇ ಹೊಸ ಸೇತುವೆ ನಿರ್ಮಾಣ ಕೈಗೊಳ್ಳಲಾಗಿತ್ತು. ಆದರೆ, ಅದು ಪೂರ್ಣಗೊಂಡಿಲ್ಲ. ಹಾಗಾಗಿ, ಬದಲಿ ಮಾರ್ಗ ಸೂಚಿಸಲಾಗಿದೆ. ಎರಡು ದಿನಗಳ ಒಳಗೆ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು’ ಎಂಜಿನಿಯರ್ ನಾಗರಾಜ್ ನಾಯ್ಕ ಪ್ರತಿಕ್ರಿಯಿಸಿದರು.