ಕಾರ್ಗಲ್:ಇಲ್ಲಿನ ಮುಖ್ಯರಸ್ತೆಯಲ್ಲಿ ಪೊಲೀಸ್ ಇಲಾಖೆಯಿಂದ ಅಪರಾಧ ತಡೆ ಜಾಗೃತಿ ಸಪ್ತಾಹ ಅಂಗವಾಗಿ ಹೆಲ್ಮೆಟ್ ಕುರಿತು ಜಾಗೃತಿ ಮೂಡಿಸಿದ ಪೊಲೀಸರು, ಹೆಲ್ಮೆಟ್ ಧರಿಸಿದವರಿಗೆ ಗುಲಾಬಿ ಹೂ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಧರಿಸದವರಿಗೆ ದಂಡ ವಿಧಿಸಿ ಬಿಸಿ ಮುಟ್ಟಿಸಿದರು.
ಜಾಗೃತಿ ಸಪ್ತಾಹ ಅಂಗವಾಗಿ ಕಾರ್ಗಲ್ ಮಹಾಗಣಪತಿ ದೇವಸ್ಥಾನದಿಂದ ಹಳೇ ಅಂಚೆ ಕಚೇರಿ ಮಾರ್ಗವಾಗಿ, ಚೌಡೇಶ್ವರಿ ದೇವಾಲಯ, ಮಹಾವೀರ ವೃತ್ತ, ಕಾರ್ಗಲ್ ಮುಖ್ಯರಸ್ತೆಯವರೆಗೆ ಬೈಕ್ ರ್ಯಾಲಿ ನಡೆಸಿ ಜಾಗೃತಿ ಮೂಡಿಸಿದರು.
‘ದ್ವಿಚಕ್ರ ವಾಹನಗಳ ಅಪಘಾತ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾವು–ನೋವುಗಳು ತಲೆಗೆ ಪೆಟ್ಟಾಗಿ ಸಂಭವಿಸುತ್ತಿದೆ. ಅಮೂಲ್ಯವಾದ ಜೀವಗಳನ್ನು ಉಳಿಸಲು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು’ ಎಂದು ಸಾಗರ ಉಪವಿಭಾಗದ ಎಎಸ್ಪಿ ಡಾ.ರೋಹನ್ ಜಗದೀಶ್ ತಿಳಿಸಿದರು.
ಅಪ್ರಾಪ್ತ ಬಾಲಕರು ವಾಹನ ಚಾಲನೆ ಮಾಡುವುದನ್ನು ಪೋಷಕರು ಸಾಧ್ಯವಾದಷ್ಟು ತಪ್ಪಿಸಬೇಕು. ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಸಲಹೆ ನೀಡಿದರು.
ಸರ್ಕಲ್ ಇನ್ಸ್ಪೆಕ್ಟರ್ ಕೃಷ್ಣಪ್ಪ, ಸಬ್ ಇನ್ಸ್ಪೆಕ್ಟರ್ ತಿರುಮಲೇಶ್ ಇದ್ದರು.