ಭದ್ರಾವತಿ: ಮಹಿಳಾ ಸಿಬ್ಬಂದಿ ಜತೆಗೆ ಅನುಚಿತ ವರ್ತನೆ ಆರೋಪದ ಮೇಲೆ ತಹಶೀಲ್ದಾರ್ ಎಚ್.ಸಿ. ಶಿವಕುಮಾರ್ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಮಹಿಳಾ ಸಿಬ್ಬಂದಿ ಜತೆಗೆ ತಹಶೀಲ್ದಾರ್ ಅವರು ಅನುಚಿತವಾಗಿ ವರ್ತಿಸಿದ ಸಂಬಂಧಹಳೇನಗರ ಠಾಣೆಯಲ್ಲಿ ಪ್ರಕರಣ ದಾಖಲಾದ ಕೆಲ ಹೊತ್ತಿನಲ್ಲೇ ಜಿಲ್ಲಾಧಿಕಾರಿ ಈ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಶಿವಕುಮಾರ್ ಅವರ ಸ್ಥಾನಕ್ಕೆ ಶಿವಮೊಗ್ಗ ತಹಶೀಲ್ದಾರ್ ಡಾ.ಎನ್.ಜೆ. ನಾಗರಾಜ್ ಅವರನ್ನು ಪ್ರಭಾರರನ್ನಾಗಿ ನೇಮಿಸಿದ್ದಾರೆ.
ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ: ತಹಶೀಲ್ದಾರ್ ಶಿವಕುಮಾರ್ ಅವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಹಳೇನಗರ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.
ಆರಂಭದಲ್ಲಿ ಮಹಿಳೆ ನೀಡಿದ್ದ ದೂರನ್ನು ಪೊಲೀಸರು ದಾಖಲಿಸಿಕೊಂಡಿರಲಿಲ್ಲ. ಡಿಎಸ್ಎಸ್ ಹಾಗೂ ಜೆಡಿಎಸ್ ಮುಖಂಡರು ಠಾಣೆ ಎದುರು ಪ್ರತಿಭಟನೆ ನಡೆಸಿದ ಬಳಿಕ ಎಫ್ಐಆರ್ ದಾಖಲಿಸಲಾಗಿತ್ತು.