ಸಾಗರ: ಗ್ರಾಮೀಣ ಜನರು ತಮ್ಮ ನಿತ್ಯದ ಬದುಕಿನಲ್ಲಿ ಹಲವು ಕಷ್ಟಗಳನ್ನು ಎದುರಿಸುತ್ತಿರುತ್ತಾರೆ. ನಗರ ಪ್ರದೇಶದಲ್ಲಿರುವ ಸರ್ಕಾರಿ ಕಚೇರಿಗಳಿಗೆ ಬರುವುದೇ ದುಸ್ತರವಾಗಿರುತ್ತದೆ. ಹೀಗಾಗಿ ಗ್ರಾಮೀಣ ಜನರ ಅಗತ್ಯಗಳಿಗೆ ಸರ್ಕಾರದ ಇಲಾಖೆ ಸ್ಪಂದಿಸಬೇಕಿದೆ ಎಂದು ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್ ಹೇಳಿದರು.
ತಾಲ್ಲೂಕಿನ ತಲವಾಟ ಗ್ರಾಮದಲ್ಲಿ ಶನಿವಾರ ನಡೆದ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಸಾಮಾಜಿಕ ಭದ್ರತಾ ಯೋಜನೆ ಸೇರಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯದ ಪತ್ರ ವಿತರಿಸಿ ಅವರು ಮಾತನಾಡಿದರು.
ಸರ್ಕಾರದ ಸೌಲಭ್ಯಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ಅವರ ಮನೆ ಬಾಗಿಲಿಗೆ ತಲುಪಿಸಬೇಕು ಎಂಬುದು ಕಾರ್ಯಕ್ರಮದ ಉದ್ದೇಶವಾಗಿದೆ. ಹಲವು ಯೋಜನೆಗಳ ಮಾಹಿತಿಯನ್ನು ಗ್ರಾಮೀಣ ಜನರಿಗೆ ಈ ಮೂಲಕ ತಲುಪಿಸಲಾಗುತ್ತಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲ್ಪನಾ ಸತೀಶ್, ‘ಸರ್ಕಾರಿ ಅಧಿಕಾರಿಗಳು ಗ್ರಾಮೀಣ ಪ್ರದೇಶಕ್ಕೆ ಬಂದು ಜನರ ಕುಂದುಕೊರತೆಗಳನ್ನು ಆಲಿಸಿ ಸೌಲಭ್ಯಗಳನ್ನು ಕಲ್ಪಿಸುವುದರಿಂದ ಜನರು ಕಚೇರಿಗೆ ಅಲೆಯುವುದು ತಪ್ಪುತ್ತದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು’ ಎಂದರು.
ಸರ್ವೆ ಇಲಾಖೆಯ ಗೋಪಿನಾಥ್, ಅರಣ್ಯ ಇಲಾಖೆಯ ಛಾಯಾ ಕೆ.ವಿ., ಆರೋಗ್ಯ ಇಲಾಖೆಯ ಕಾವ್ಯ ಪಿ.ಜೆ., ಪ್ರಮುಖರಾದ ಪ್ರಸನ್ನ ಕೊಳಚೆಗಾರ, ಲಕ್ಷ್ಮಿ, ಕನ್ನಪ್ಪ ಮಂಜಿನಕಾನು, ಮಲ್ಲಿಕಾರ್ಜುನ ಸ್ವಾಮಿ, ನಾಗರಾಜ್, ನಾಗರತ್ನ ಇದ್ದರು.