ಶಿವಮೊಗ್ಗ: ಸಮಾಜ ಸಾಧನಾ ಸಲಕರಣೆಗಳ ಆಧುನಿಕತೆ ಒಪ್ಪಿಕೊಂಡಿದ್ದರೂ, ಪ್ರಾಚೀನ ಕಾಲದ ಮೌಢ್ಯಾಚರಣೆಗಳಿಗೆ ಜೋತುಬಿದ್ದಿರುವುದು ಆಶ್ಚರ್ಯ ಮೂಡಿಸುತ್ತದೆ ಎಂದು ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ನಗರದಲ್ಲಿ ಬುಧವಾರ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ನೀಡಿದ ‘ಡಾ.ಎಚ್.ಎನ್.ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.
‘ಮೂವತ್ತು ವರ್ಷಗಳ ಸುದೀರ್ಘ ಪ್ರಯಣದಲ್ಲಿ ಧರ್ಮಪೀಠದ ಮೂಲಕ ವೈಜ್ಞಾನಿಕ ವಿಚಾರಗಳ ಜಾಗೃತಿ ಮೂಡಿಸಿದ ಸಂತೃಪ್ತಿ ಇದೆ. ಜನರ ಮನಸ್ಸಿನಲ್ಲಿ ಇರುವಂತಹ ಮೌಢ್ಯಗಳನ್ನು ದೂರ ಮಾಡುವ ಪ್ರಯತ್ನ ಮಾಡಿದ್ದೇವೆ. ಗ್ರಹಣದ ತಪ್ಪು ಕಲ್ಪನೆಗಳನ್ನು ದೂರ ಮಾಡಲಾಗಿದೆ. ವಿಜ್ಞಾನಪರ, ವೈಚಾರಿಕ ಪರವಾದ ಚಿಂತನೆಗಳನ್ನು ಬೆಳೆಸುವ ಕೆಲಸ ಮಾಡಲಾಗಿದೆ ಎಂದರು.
ವಿಜ್ಞಾನದ ಆವಿಷ್ಕಾರ, ತಂತ್ರಜ್ಞಾನದಿಂದ ಸಿದ್ಧಪಡಿಸಿದ ಉಪಕರಣಗಳ ಆವಶ್ಯಕತೆ ಎಲ್ಲರಿಗೂ ಇದೆ. ಆ ಮೂಲಕ ವಿಜ್ಞಾನ, ತಂತ್ರಜ್ಞಾನ ಒಪ್ಪಿಕೊಳ್ಳಬೇಕಿದೆ. ಸಂಪ್ರದಾಯದ ಹೆಸರಿನ ಮೌಢ್ಯ ಆಚರಣೆ ನಿಲ್ಲಿಸಬೇಕಿದೆ ಎಂದು ಸಲಹೆ ನೀಡಿದರು.
ಹಿರಿಯ ರಂಗಕರ್ಮಿ ದೊಡ್ಡಣ್ಣ, ಸಮಾಜ ಸೇವಕರಾದ ಡಾ. ಶ್ರೀಧರ್ಕುಮಾರ್, ಪದ್ಮನಾಭಗೌಡ, ನಂದಿನಿ ಮೋಹನ್ಕುಮಾರ್, ವೈದ್ಯ ಟಿ.ಎಚ್.ಆಂಜಿನಪ್ಪ, ಡಾ.ಶ್ರೀರಾಮಚಂದ್ರ, ದಿಲೀಪ್ಕುಮಾರ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಸಮಾರೋಪ ಭಾಷಣ ಮಾಡಿದರು. ಮಾಜಿ ಸಚಿವ ಎಸ್.ಕೆ.ಕಾಂತ, ಪ್ರೆಸ್ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಶಿವಮೊಗ್ಗದ ಎಚ್.ಎನ್.ಪ್ರಶಸ್ತಿ ಪುರಸ್ಕೃತ ಸೀತಾರಾಮ್, ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯ ಸಂಘಟನಾ ಕಾರ್ಯದರ್ಶಿ ವಿ.ಟಿ.ಸ್ವಾಮಿ, ಜಿಲ್ಲಾ ಘಟಕದ ಧ್ಯಕ್ಷ ರಾಜೇಂದ್ರ ಆವಿನಹಳ್ಳಿ ಇದ್ದರು.
ಕುವೆಂಪು ಹಾಗೂ ನರಸಿಂಹಯ್ಯ ಅವರ ಕುರಿತು ಸಾಹಿತಿ ಡಾ. ಕುಂ.ವೀರಭದ್ರಪ್ಪ ಉಪನ್ಯಾಸ ನೀಡಿದರು. ಮುಂದಿನ ವರ್ಷ ತುಮಕೂರಿನಲ್ಲಿ ರಾಜ್ಯಮಟ್ಟದ ಎರಡನೇ ವೈಜ್ಞಾನಿಕ ಸಮ್ಮೇಳನ, ಮಂಡ್ಯದಲ್ಲಿ ಮಕ್ಕಳ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಯಿತು.