ಶಿವಮೊಗ್ಗ: ಹಿಂದೂ ಮುಸ್ಲಿಂ ಭಾವೈಕ್ಯದ ಪ್ರತೀಕವಾಗಿರುವ ರಂಜಾನ್ ಹಾಗೂ ಬಸವೇಶ್ವರ ಜಯಂತಿಯನ್ನು ಸರಳವಾಗಿ ಆಚರಿಸುವ ಮೂಲಕ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.
ತಿಂಗಳ ಉಪವಾಸ ವ್ರತ ಮಾಡಿದ ಮುಸ್ಲಿಂ ಸಮುದಾಯದವರೆಲ್ಲ ಈಗ ಈದ್ ಉಲ್ ಫಿತ್ರ್ಗಾಗಿ ಕಾಯುತ್ತಿದ್ದಾರೆ. ರಂಜಾನ್ ಅಂಗವಾಗಿ ಮಾರುಕಟ್ಟೆಯಲ್ಲಿ ಹೊಸ ಬಟ್ಟೆ ಖರೀದಿ ಜೋರಾಗಿಯೇ ನಡೆದಿದೆ. ಮಂಗಳವಾರ ಈದ್ಗಾ ಮೈದಾನದಲ್ಲಿ ಸಮೂಹಿಕ ಪ್ರರ್ಥನೆ ನಡೆಯಲಿದೆ.
ಶಿವಮೊಗ್ಗದಲ್ಲಿ ಸೌಹಾರ್ದಯುತ ವಾತಾವರಣವಿದ್ದು ಮೇ 3ರ ಮಂಗಳವಾರದಂದು ರಂಜಾನ್ ಹಾಗೂ ಬಸವ ಜಯಂತಿ ಆಚರಣೆ ಏಕಕಾಲಕ್ಕೆ ಬಂದಿದೆ. ಹೀಗಾಗಿ ಹಿಂದೂ-ಮುಸ್ಲಿಂ ಸಮುದಾಯದ ಮುಖಂಡರು ಹಬ್ಬ ಆಚರಣೆಗೆ ಮುಂದೆ ನಿಂತು ಸರಳವಾಗಿ ಆಚರಿಸುವ ಮೂಲಕ ಯಶಸ್ಸಿಗೆ ಕಾರಣರಾಗಬೇಕು ಎಂದು ಹೇಳಿದರು.
ಹಬ್ಬಗಳು ಸುಗಮವಾಗಿ ನಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಬಂದೋಬಸ್ತ್ ಕಲ್ಪಿಸಲಾಗುವುದು ಹಾಗೂ ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.