ಸಮೀಪದ ಮಂಗೋಟೆ ಗ್ರಾಮದ ರೈತ ಹನುಮಂತ ಕಳೆದ ವರ್ಷ ಸ್ವಂತ ಹಣದಲ್ಲಿ ಟಿ.ಸಿ. ಅಳವಡಿಸಿಕೊಂಡು, ಮನೆಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದರು. ಮೆಸ್ಕಾಂ ಅಧಿಕಾರಿಗಳು ಮೀಟರ್ ಹಾಗೂ ವಿದ್ಯುತ್ ಕಂಬವನ್ನು ಹಾಕಿದ್ದರು. ಆದರೆ, ಪ್ರತಿನಿತ್ಯ ಕೇವಲ 2 ತಾಸು ಮಾತ್ರ ವಿದ್ಯುತ್ ನೀಡುತ್ತಿದ್ದರು. ಒಂದೆರಡು ತಿಂಗಳು ಅಕ್ಕಪಕ್ಕದ ಮನೆಗಳಲ್ಲಿ ಮಿಕ್ಸಿ ಹಾಕಿಕೊಂಡು, ಮೊಬೈಲ್ ಚಾರ್ಚ್ ಮಾಡಿಕೊಂಡು ರೋಸಿ ಹೋದ ಹನುಮಂತ, ಮೆಸ್ಕಾಂ ಎಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಮಾತಿನ ಚಕಮಕಿ ವೇಳೆ ಅಧಿಕಾರಿ, ‘ಮನೆಯಲ್ಲಿ ಕರೆಂಟ್ ಇಲ್ಲ ಎಂದರೆ ಕಚೇರಿಗೆ ಬಂದು ಮಿಕ್ಸಿ ಮಾಡಿಕೊಂಡು ಹೋಗು’ ಎಂದಿದ್ದರು ಎನ್ನಲಾಗಿದೆ. ಅಂದಿನಿಂದ ರೈತ ಹನುಮಂತ ಮೆಸ್ಕಾಂ ಕಚೇರಿಗೆ ಬಂದು ಮಿಕ್ಸಿ ಹಾಕಿಕೊಂಡು ಹೋಗುತ್ತಿದ್ದರು.