ಆನವಟ್ಟಿ: ‘ರಾಜಕೀಯ ಪಕ್ಷಗಳು ಇಂದು ಅಂಬೇಡ್ಕರ್ ಅವರ ಜಯಂತಿ ಆಚರಣೆ ಮಾಡುತ್ತವೆ. ಎಲ್ಲಾ ರಾಜಕೀಯ ಪಕ್ಷಗಳು ಜಯಂತಿಯನ್ನು ಶೋಕಿಗಾಗಿ ಮಾಡದೆ, ನಿತ್ಯ ಬದುಕಿನಲ್ಲಿ ಆಳವಡಿಸಿಕೊಳ್ಳಬೇಕು. ಆಗ ಮಾತ್ರ ಅವರಿಗೆ ನಿಜವಾದ ಗೌರವ ಸಲ್ಲುತ್ತದೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.
ಆನವಟ್ಟಿಯ ಮಲ್ಲಿಕಾರ್ಜುನ್ಗೌಡ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ 131ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಸ್ವತಂತ್ರ ಪೂರ್ವದಲ್ಲಿ ಬ್ರಿಟಿಷರಿಗೆ ಆಳಾಗಿದ್ದಂತೆ ಸ್ವತಂತ್ರ ಭಾರತದಲ್ಲಿ ಮತ್ತೆ ಧರ್ಮದ ಹೆಸರಲ್ಲಿ ಆಳಾಗುವುದು ಬೇಡ. ಪವಿತ್ರ ಗ್ರಂಥಗಳಾದ ಮಹಾಭಾರತ, ಕುರಾನ್, ಬೈಬಲ್ ಸೇರಿ ಇತರ ಗ್ರಂಥಗಳನ್ನು ಒಳಗೊಂಡ ಎಲ್ಲಾ ಧರ್ಮೀಯರಿಗೂ ಒಪ್ಪುವಂತಹ ಹಾಗೂ ಜಗತ್ತಿಗೆ ಮಾದರಿಯಾಗುವಂತಹ ಸಂವಿಧಾನ ಎಂಬ ಮಹಾನ್ ಗ್ರಂಥವನ್ನು ಅಂಬೇಡ್ಕರ್ ನೀಡಿದ್ದಾರೆ. ಧರ್ಮ-ಧರ್ಮದ ನಡುವೆ ಕಚ್ಚಾಟ ಮಾಡದೆ ಹೇಗೆ ಬದುಕಬೇಕು ಅನ್ನುವುದನ್ನು ಅವರು ಬರೆದುಕೊಟ್ಟಿದ್ದಾರೆ. ಅದನ್ನು ನೋಡಿಕೊಂಡು ಹೋದರೆ ಸಾಕು’ ಎಂದರು.
ಇಂದಿನ ರಾಜಕೀಯ ಸಂವಿಧಾನ ವಿರುದ್ಧವಾಗಿ ಹೋಗುತ್ತಿದೆ. ದೇಶದಲ್ಲಿ ಶಾಂತಿ, ಸೌಹರ್ದತೆ, ಸಹೋದರತ್ವ ನೆಲೆಸುವ ಬದಲು, ದ್ವೇಶ, ಧರ್ಮದ ಹೆಸರಲ್ಲಿ ಕಚ್ಚಾಟ, ಜನರ ಭಾವನೆಗಳ ಮೇಲೆ ರಾಜಕರಣ ನಡೆಯುತ್ತಿದೆ. ಇಂತಹ ಬೆಳೆವಣಿಗೆಗಳು ಒಳ್ಳೇಯದಲ್ಲ. ಅಂಬೇಡ್ಕರ್ ನೀಡಿರುವ ಸಂವಿಧಾನವನ್ನು ಗೌರವಿಸಿ, ಸಂವಿಧಾನದ ಹಾದಿಯಲ್ಲಿ ನಡೆದುಕೊಂಡಾಗ ಮಾತ್ರ ಅಂಬೆಡ್ಕರ್ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತೆ ಎಂದರು.