ಶಿವಮೊಗ್ಗ: ಸೂರ್ಯನಮಸ್ಕಾರ ಮಾಡುವುದರಿಂದ ದೇಹ ಮತ್ತು ಮನಸ್ಸು ಉಲ್ಲಾಸಗೊಳ್ಳುತ್ತದೆ. ಶರೀರದ ಸಪ್ತಚಕ್ರಗಳು ಜಾಗೃತಗೊಳ್ಳುತ್ತವೆ. ನೆತ್ತಿಯಿಂದ ಪಾದದ ತುದಿಯವರೆಗೂ ಪ್ರತಿಯೊಂದು ಅಂಗಗಳು ಸಕ್ರಿಯವಾಗುತ್ತವೆ ಎಂದು ಯೋಗಾಚಾರ್ಯ ಡಾ. ಸಿ.ವಿ. ರುದ್ರಾರಾಧ್ಯ ಹೇಳಿದರು.
ಇಲ್ಲಿನ ಕಲ್ಲಹಳ್ಳಿ ವಿನೋಬಾ ನಗರದಲ್ಲಿರುವ ಶಿವ ಗಂಗಾ ಯೋಗ ಕೇಂದ್ರದಲ್ಲಿ ಶನಿವಾರ ರಥಸಪ್ತಮಿ ಅಖಂಡ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಣಾರ್ಥಿಗಳನ್ನು ಕುರಿತು ಅವರು ಮಾತನಾಡಿದರು.
ಮುಖದಲ್ಲಿ ತೇಜಸ್ಸು ಹೆಚ್ಚುತ್ತದೆ. ನಿತ್ಯವೂ ಕನಿಷ್ಠ ಒಂದು ಮಂಡಲ ಸೂರ್ಯ ನಮಸ್ಕಾರ ಮಾಡಿ ಪ್ರತ್ಯಕ್ಷ ದೈವ ಸೂರ್ಯನ ಅನುಗ್ರಹ ಪಡೆದು ಕೆಲವು ಪ್ರಾಣಾಯಾಮದ ಅಭ್ಯಾಸ ಮಾಡಿ ಸ್ವಲ್ಪಹೊತ್ತು ಧ್ಯಾನ ಮಾಡುವುದರಿಂದ ಸಂಪೂರ್ಣ ದಿನ ಕ್ರಿಯಾಶೀಲರಾಗಿರಬಹುದು. ಎಲ್ಲರೂ ನಿತ್ಯವೂ ಅಭ್ಯಾಸ ಮಾಡಬೇಕು ಎಂದು ಹೇಳಿದರು.
ಡಾ. ಪದ್ಮನಾಭ ಆಡಿಗ ಅವರಿಂದ ಸೂರ್ಯದೇವನ ಪೂಜೆ ನೆರವೇರಿತು. ವಿಜಯ ಬಾಯರ್ ಮತ್ತು ತಂಡದವರು ಮಂತ್ರ ಪುಷ್ಪ ಪಠಿಸಿದರು.
ಪ್ರೊ ಎಚ್. ಕೆ. ಹರೀಶ್ ಸ್ವಾಗತಿಸಿದರು. ಓಂಕಾರ ಜಿ.ಎಸ್ ಅವರು ನಿರೂಪಿಸಿದರು. ಯೋಗ ಶಿಕ್ಷಕರಾದ ವಿಜಯ ಕೃಷ್ಣ, ಲಕ್ಷ್ಮೀನಾರಾಯಣ, ರಾಜಶೇಖರ್, ಜಿ. ವಿಜಯಕುಮಾರ್, ವೀಣಾ ಶಿವಕುಮಾರ್, ಶೀಲಾ ಸುರೇಶ್ ಮತ್ತು ಮಂಜುಳಾ ಅವರಿಂದ ಸೂರ್ಯ ನಮಸ್ಕಾರದ ಪಠಣ ನೆರವೇರಿತು.