ಶಿವಮೊಗ್ಗ: ‘ಗೋಡೆ ಬರಹ ಬರೆಯುವವರು ಹೇಡಿಗಳು. ಪಿಎಫ್ಐನವರು ಮುಂದಿನಿಂದ ಬಂದು ಏನೂ ಮಾಡಲ್ಲ. ರಾತ್ರಿ ಹೊತ್ತು ಬಂದು ಒಬ್ಬರೇ ಇರುವ ಸಂದರ್ಭದಲ್ಲಿ ಕೊಲೆ ಮಾಡುತ್ತಾರೆ’ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಶಿರಾಳಕೊಪ್ಪದಲ್ಲಿ ಸಿಎಫ್ಐ ಹೆಸರಲ್ಲಿ ಗೋಡೆ ಬರಹ ಬರೆದಿರುವ ಬಗ್ಗೆ ಭಾನುವಾರ ಇಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ‘ರಾತ್ರಿ ಬಂದು ಚಾಕು ಹಾಕುವುದು, ಬಾಂಬ್ ಹಾಕುವುದು ಮಾಡಿ ತಪ್ಪಿಸಿಕೊಳ್ಳೋದು. ರಾತ್ರಿ ಹೊತ್ತು ಪೊಲೀಸರ ಕಣ್ತಪ್ಪಿಸಿ, ಓಡಾಡೋದು. ಇದನ್ನೇ ಅವರು ಮಾಡೋದು’ ಎಂದರು.
‘ದೇಶದಲ್ಲಿ ಗಲಭೆ ಎಬ್ಬಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆರಂಭದಿಂದಲೂ ಈ ರೀತಿ ಹೇಡಿ ಕೆಲಸವನ್ನು ಪಿಎಫ್ಈ ಮಾಡುತ್ತಿದೆ. ದೇಶದಲ್ಲಿ ಪಿಎಫ್ಐ ಸಂಘಟನೆಯನ್ನು ಕಾಂಗ್ರೆಸ್ ಪೋಷಿಸಿಕೊಂಡು ಬರುತ್ತಿತ್ತು. ದೇಶದ ಬಗ್ಗೆ ಪಿಎಫ್ಐಗೆ ಕಲ್ಪನೆಯೇ ಇಲ್ಲ. ಅಭಿವೃದ್ಧಿ ಬಗ್ಗೆ ಕಲ್ಪನೆಯೇ ಇಲ್ಲ. ಭಾರತದಲ್ಲಿನ ಹಿಂದುತ್ವ ಅಳಿಸಬೇಕು ಎಂದು ಪಿಎಫ್ಐ ದೇಶದ್ರೋಹಿ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು.
ನರೇಂದ್ರಮೋದಿ, ಅಮಿತ್ ಷಾ ಅಂತಹ ಹುಲಿಗಳು, ಇಲಿಗಳ ರೂಪದಲ್ಲಿರುವ ಪಿಎಫ್ಐ ಸಂಘಟನೆಯನ್ನು ಹೊಸಕಿ ಹಾಕಿದ್ದಾರೆ ಎಂದು ಹೇಳಿದರು.