ತೀರ್ಥಹಳ್ಳಿ:ಶರಾವತಿ ಸಂತ್ರಸ್ತರಿಗೆ ಭೂಮಿ ಕೊಡಲು ಅವಕಾಶಗಳು ಇದ್ದವು. ಅವುಗಳ ಬಗ್ಗೆ ಅಂದಿನ ಸರ್ಕಾರ ಕ್ರಮ ವಹಿಸಿರಲಿಲ್ಲ ಎಂದುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಳುಗಡೆ ಪ್ರದೇಶ ಗುರುತು ಮಾಡುವ ಸಂದರ್ಭ ಸಂತ್ರಸ್ತರಿಗೆ ಭೂಮಿ ಒದಗಿಸಬಹುದಿತ್ತು. 1978ರ ಅರಣ್ಯ ಕಾಯ್ದೆ ಬಂದ ಸಂದರ್ಭ ಸಂತ್ರಸ್ತರಿಗೆ ಗುರುತಿಸಿದ ಭೂಮಿ ಸರ್ವೆಯಿಂದ ಕೈಬಿಡಬಹುದಾಗಿತ್ತು. 1978ರಿಂದ 80ರಲ್ಲಿ ಕಾಯ್ದೆ ಪುನರ್ ಪರಿಶೀಲನೆ ಸಂದರ್ಭ ಆಕ್ಷೇಪಣೆ ಸಲ್ಲಿಸುವ ಅವಕಾಶವನ್ನೂ ಕೈಚೆಲ್ಲಿದ್ದರು ಎಂದು ದೂರಿದರು.
‘ಕೇಂದ್ರ ಅರಣ್ಯ ಮಂತ್ರಿ ಭೂಪೇಂದ್ರ ಯಾದವ್ ಜೊತೆ ಸಂವಾದ ನಡೆಸಿದ್ದು ಸರ್ವೆ ಕಾರ್ಯ ಮುಗಿಸಿಕೊಂಡು ಬನ್ನಿ ಎಂದು ಸೂಚಿಸಿದ್ದಾರೆ. ಜಿಲ್ಲಾಧಿಕಾರಿ, ಕಂದಾಯ ಇಲಾಖೆಗೆ ನಿರ್ದೇಶನ ನೀಡಿದ್ದು, ಸದ್ಯದಲ್ಲೆ ಸರ್ವೆ ಕಾರ್ಯ ಮುಗಿಯಲಿದೆ’ ಎಂದು ಹೇಳಿದರು.
ಪರಿಭಾವಿತ (ಡೀಮ್ಡ್) ಅರಣ್ಯವುಕಂದಾಯ ಭೂಮಿ ವ್ಯಾಪ್ತಿಗೆ ಒಳಪಟ್ಟಿದೆ. ಇದರಿಂದಾಗಿ ಮಲೆನಾಡು ಭಾಗಕ್ಕೆ ಅತಿ ಹೆಚ್ಚು ಅನುಕೂಲವಾಗಿಲಿದೆ. ತೀರ್ಥಹಳ್ಳಿಯಲ್ಲೂ ಡೀಮ್ಡ್ ಅರಣ್ಯ ಪ್ರದೇಶ ಹೆಚ್ಚಿದೆ ಎಂದರು.
ಜಿಲ್ಲೆಯಲ್ಲಿ ಬಗರ್ಹುಕುಂ ಸಮಸ್ಯೆ ಹೆಚ್ಚಿದೆ. ಸರ್ಕಾರ ದೀರ್ಘಕಾಲದಿಂದ ಬಗೆಹರಿಯದ ಸಮಸ್ಯೆಯ ಶೀಘ್ರ ಇತ್ಯರ್ಥಕ್ಕೆ ಮುಂದಾಗಲಿದೆಎಂದು ಹೇಳಿದರು.
‘60 ವರ್ಷಗಳ ಹಿಂದೆ ಶರಾವತಿ ಸಂತ್ರಸ್ತರ ಪೂರ್ವಿಕರ ತ್ಯಾಗದಿಂದ ನಾಡಿಗೆ ಬೆಳಕು ಸಿಕ್ಕಿದೆ.ಬಹಳ ದಿನಗಳ ಸಮಸ್ಯೆ ಪರಿಹಾರ ನನ್ನ ಪಾಲಿಗೆ ಬಂದಿದೆ. ಜನರಿಗೆ ಬದುಕು ನಿರ್ಮಿಸುವುದು ಮುಖ್ಯ. ವಿರೋಧ ಪಕ್ಷಗಳು ಒಂದೇ ವಿಚಾರದಲ್ಲಿ ಎಷ್ಟು ಬಾರಿ ರಾಜಕಾರಣ ಮಾಡುತ್ತಾರೆ’ ಎಂದು ಕುಟುಕಿದರು.