ಶಿವಮೊಗ್ಗ: ನಗರದಲ್ಲಿ ಭಾನುವಾರ ಗುರು ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ ಸಂಭ್ರಮದಿಂದ ನಡೆಯಿತು.ವಿವಿಧೆಡೆ ಇರುವ ರಾಘವೇಂದ್ರ ಸ್ವಾಮಿ ಮಠಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ನಡೆದವು.ಮಹೋತ್ಸವದ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು.
ದುರ್ಗಿಗುಡಿಯಲ್ಲಿನ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ ಆರಾಧನಾ ಮಹೋತ್ಸವ ಪ್ರಯಕ್ತ ರಥೋತ್ಸವ ನಡೆಸಲಾಯಿತು. ನಗರದ ಮಂಜುನಾಥ ಬಡಾವಣೆ, ಬಿ.ಬಿ. ರಸ್ತೆಯಲ್ಲಿರುವ ರಾಘವೇಂದ್ರಸ್ವಾಮಿಮಠದಲ್ಲಿಯೂ ಪೂಜೆ ನೆರವೇರಿತು.
ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಭಕ್ತರಿಗೆ ಮಧ್ಯಾಹ್ನ ಪ್ರಸಾದ ವಿತರಿಸಲಾಯಿತು.ಮೂರು ದಿನಗಳ ಕಾಲ ನಡೆದ ಆರಾಧನಾ ಮಹೋತ್ಸವದಲ್ಲಿ ಭಕ್ತರು ಅಪಾರ ಸಂಖ್ಯೆಯಲ್ಲಿ ಬಂದು ಗುರು ರಾಯರ ಕೃಪೆಗೆ ಪಾತ್ರರಾದರು.
ಮಾಧ್ಯಮದವರೊಂದಿಗೆ ಮಾತ ನಾಡಿದ ದುರ್ಗಿಗುಡಿ ರಾಘವೇಂದ್ರ ಸ್ವಾಮಿ ಮಠದ ಕಾರ್ಯದರ್ಶಿ ಸುರೇಶ್, ಮಠಕ್ಕೆ 61 ವರ್ಷಗಳ ಇತಿಹಾಸವಿದೆ. ಪ್ರತಿ ವರ್ಷದಂತೆ ಆರಾಧನೆಯನ್ನು ವಿಜೃಂಭಣೆಯಿಂದ ಮಾಡುತ್ತಿದ್ದು, ಸ್ವಾಮಿಗೆ ವಿಶೇಷ ಹಣ್ಣಿನ ಹಾಗೂ ಬೆಣ್ಣೆ ಅಲಂಕಾರ ಮಾಡಲಾಗಿದೆ ಎಂದರು.
ಕಳೆದ ಮೂರು ವರ್ಷದಿಂದ ರಾಯರ ರಥೋತ್ಸವ ನಡೆದಿರಲಿಲ್ಲ. ಈ ಬಾರಿ ಮಾಡಲಾಗಿದೆ.ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಮಹೋತ್ಸವ ಪ್ರಯಕ್ತ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಗಿದ್ದು, ಈವರೆಗೆ ಹತ್ತು ಸಾವಿರ ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ ಎಂದು ತಿಳಿಸಿದರು.