ಶಿವಮೊಗ್ಗ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಶನಿವಾರ ತಿರಂಗಾ ಅಭಿಯಾನ ಆರಂಭವಾಯಿತು. ಇದಕ್ಕೆ ಜಿಲ್ಲೆಯ ಜನರಿಂದಲೂ ಅಭೂತ ಪೂರ್ವ ಸ್ಪಂದನೆ ವ್ಯಕ್ತವಾಯಿತು. ಸಂಜೆಯ ವೇಳೆಗೆ ನಗರದ ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಾಡುವುದು ಕಂಡುಬಂತು.
ಪ್ರಧಾನಿ ಮೋದಿ ಮನವಿಯಂತೆ ಆಗಸ್ಟ್ 13ರ ಬೆಳಿಗ್ಗೆಯಿಂದ ಆಗಸ್ಟ್ 15ರ ಸಂಜೆವರೆಗೆ ಅಭಿಯಾನ ನಡೆಯಲಿದೆ. ಹೀಗಾಗಿ ವಿವಿಧ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳ, ಬಡಾವಣೆಗಳ ಮುಖಂಡರು ರಾಷ್ಟ್ರಧ್ವಜವನ್ನು ತಮ್ಮ ಮನೆ, ಕಚೇರಿಗಳಲ್ಲಿ ಹಾರಿಸಿ ದೇಶಪ್ರೇಮ ಮೆರೆದರು.
‘ಇದೊಂದು ಪಕ್ಷಾತೀತ ಕಾರ್ಯಕ್ರಮ. ಅಭೂತಪೂರ್ವ ಯಶಸ್ವಿಯಾಗಿದೆ. ವಾಹನ ಚಾಲಕರು, ಆಟೊ ಚಾಲಕರು ತಮ್ಮ ವಾಹನಗಳಲ್ಲಿ ರಾಷ್ಟ್ರಧ್ವಜ ಕಟ್ಟಿಕೊಂಡು ದೇಶಪ್ರೇಮ ತೋರಿದರು. ಸರ್ಕಾರಿ ಕಚೇರಿಗಳಲ್ಲಿ, ಸಂಘ–ಸಂಸ್ಥೆಗಳ ಕಚೇರಿಗಳಲ್ಲಿ ರಾಷ್ಟ್ರಧ್ವಜ ಹಾರಿಸಲಾಯಿತು’ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಕೆ.ಬಿ. ಅಶೋಕ್ ನಾಯ್ಕ್, ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ಮೇಯರ್ ಸುನೀತಾ ಅಣ್ಣಪ್ಪ ಮನೆಗಳ ಮೇಲೆ ಧ್ವಜಾರೋಹಣ ಮಾಡಿದರು. ಬಸವಕೇಂದ್ರ, ಬೆಕ್ಕಿನ ಕಲ್ಮಠದಲ್ಲಿ ಶ್ರೀಗಳು, ವಿವಿಧ ಶಾಲಾ, ಕಾಲೇಜುಗಳ ಮೇಲೆಯೂ ಧ್ವಜ ಹಾರಿಸಲಾಗಿತ್ತು.ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಂದ ತಿರಂಗಾ ಹಿಡಿದು ನಗರದಲ್ಲಿ ಜಾಥಾ ನಡೆಸಿದರು.
ಗೃಹರಕ್ಷಕರಿಂದ ತಿರಂಗಾ ಜಾಥಾ: ಶಿವಮೊಗ್ಗದ ಬಿ.ಎಚ್.ರಸ್ತೆ ಡಿವೈಎಸ್ಪಿ ಕಚೇರಿ ಆವರಣದಲ್ಲಿರುವ ಗೃಹರಕ್ಷಕ ದಳದ ಕಚೇರಿಯಿಂದ ಗೃಹರಕ್ಷಕರು ರಾಷ್ಟಧ್ವಜ ಹಿಡಿದು ‘ಭಾರತ್ ಮಾತಾಕಿ ಜೈ‘, ‘ವಂದೇಮಾತರಂ‘ ಎಂದು ಘೋಷವಾಕ್ಯದೊಂದಿಗೆ ನಗರದ ಬಿ.ಎಚ್.ರಸ್ತೆಯ ಮೆಗ್ಗಾನ್ ಆಸ್ಪತ್ರೆ, ಸಿಮ್ಸ್, ಅಶೋಕ ವೃತ್ತ, ರಾಯಲ್ ಆರ್ಕೆಡ್, ಎಎ ವೃತ್ತ, ಶಿವಪ್ಪನಾಯಕ ವೃತ್ತ, ತಿರಂಗ ಯಾತ್ರೆ ನಡೆಸಿದರು.
ಗೃಹರಕ್ಷಕದಳದ ಜಿಲ್ಲಾ ಕಮಾಂಡೆಂಟ್ ಚಂದನ್ ಪಟೇಲ್, ಡೆಪ್ಯೂಟಿ ಕಮಾಂಡೆಂಟ್ ಹಾಲಪ್ಪ ದಾವಣಗೆರೆ, ಸಹಾಯಕ ಬೋಧಕ ದಿನೇಶ್, ಘಟಕಾಧಿಕಾರಿ ಶಿವಾನಂದಪ್ಪ ಜಿ. ಎನ್. ಸಿ.ಓಎಸ್. ಶ್ರೀಧರಮೂರ್ತಿ, ಎನ್.ಬಿ.ಸಿಂಗ್, ಶ್ರೀದೇವಿ, ಚನ್ನವೀರಪ್ಪ ಗಾಮನಗಟ್ಟಿ, ಶೋಭರಾವ್, ಕೊಟ್ರೇಶ್, ಪವಿತ್ರ, ಮೀನಾಕ್ಷಿ, ಅರುಳುವೇರಿ, ಅರಿವು ಸಂಸ್ಥೆಯ ಲಕ್ಷ್ಮೀಕಾಂತ್ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.