ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯ ಬಗ್ಗೆ ಹೆಚ್ಚಿನ ತನಿಖೆಗಾಗಿ,ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಅಧಿಕಾರಿಗಳು ಬುಧವಾರ ರಾತ್ರಿಯಿಂದ ನಗರದಲ್ಲಿ ಬೀಡು ಬಿಟ್ಟಿದ್ದಾರೆ.
ಎಂಟು ವಾಹನಗಳಲ್ಲಿ ಬಂದಿರುವ ಎನ್ಐಎ ಅಧಿಕಾರಿಗಳು ಗುರುವಾರ ನಗರದ 13 ಕಡೆ ತೆರಳಿ ತನಿಖೆ ನಡೆಸಿದರು. ಹರ್ಷ ಕೊಲೆ ನಡೆದ ಸ್ಥಳ, ಆತನ ಮನೆ, ಓಡಾಡುತ್ತಿದ್ದ ಸ್ಥಳ, ಆರೋಪಿಗಳು ಆಶ್ರಯ ಪಡೆದಿದ್ದ ಸ್ಥಳ ಸೇರಿದಂತೆ ಹಲವು ಮಾಹಿತಿಯನ್ನು ತನಿಖಾ ತಂಡ ಪಡೆಯಿತು. ಅವರಿಗೆ ಸ್ಥಳೀಯ ಪೊಲೀಸರು ನೆರವಾದರು.
ಶಿವಮೊಗ್ಗ ನಗರದಲ್ಲಿ ತನಿಖೆಯ ವೇಳೆ ಆರೋಪಿಗಳು ಹಾಗೂ ಶಂಕಿತರಿಗೆ ಸಂಬಂಧಿಸಿದ ಮೊಬೈಲ್ ಫೋನ್, ಸಿಮ್ ಕಾರ್ಡ್ಗಳು, ಮೆಮೊರಿ ಕಾರ್ಡ್ಗಳು, ಹಾರ್ಡ್ ಡಿಸ್ಕ್ ಸೇರಿದಂತೆ ಡಿಜಿಟಲ್ ಸಾಮಗ್ರಿಗಳು ಹಾಗೂ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎನ್ಐಎ ಪ್ರಕಟಣೆ ತಿಳಿಸಿದೆ.
ಆರೋಪಿಗಳಾದ ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾದ ಅಬ್ದುಲ್ ಆಫ್ವಾನ್ (21), ವಾದಿ ಎ ಹುದಾ ನಿವಾಸಿಗಳಾದ, ಅಬ್ದುಲ್ ಖಾದರ್ ಜಿಲಾನ್ (25), ಮತ್ತು ವಾದಿ ಎ ಹುದಾ ನಿವಾಸಿ ಜಾಫರ್ ಸಾದಿಕ್ (50), ಇಲ್ಯಾಸ್ ನಗರದ ಫರಜ್ ಪಾಷಾ (24) ಮತ್ತು ಜೆ.ಪಿ ನಗರದ ಸೈಯದ್ ನದೀಂ (20) ಎನ್ಐಎ ಕಸ್ಟಡಿಯಲ್ಲಿದ್ದಾರೆ.
2022ರ ಫೆಬ್ರುವರಿ 20ರಂದು ರಾತ್ರಿ 9 ಗಂಟೆಯ ವೇಳೆಯಲ್ಲಿ ಶಿವಮೊಗ್ಗದಲ್ಲಿ ಹರ್ಷ ಹತ್ಯೆಯಾಗಿತ್ತು. ಈ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸಲಾಗಿತ್ತು.