ಶಿವಮೊಗ್ಗ: ಜಿಲ್ಲೆಯ ಹಲವಡೆ ಸೋಮವಾರ ಸಂಜೆ ಗಾಳಿ, ಗುಡುಗು ಸಹಿತ ಜೋರು ಮಳೆಯಾಗಿದೆ. ದಿಢೀರ್ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಚಂಡಮಾರುತದ ಪರಿಣಾಮ ಕಳೆದ ವಾರ ಜಿಲ್ಲೆಯ ವಿವಿಧೆಡೆ ಮಳೆಯಾಗಿತ್ತು. ಎರಡು ದಿನಗಳಿಂದ ಮಳೆ ಬಿಡುವು ನೀಡಿತ್ತು. ಈ ಮಧ್ಯೆ ದಿಢೀರ್ ಮಳೆಯಾಗಿದೆ. ಇದರಿಂದ ಸಂಜೆ ವೇಳೆ ವ್ಯಾಪಾರಸ್ತರಿಗೆ ತೊಂದರೆ ಉಂಟಾಗಿತ್ತು.
ಭದ್ರಾವತಿ, ಶಿಕಾರಿಪುರ, ಶಿವಮೊಗ್ಗ, ಸೊರಬ, ಶಿರಾಳಕೊಪ್ಪ, ಸಾಗರ, ಆನಂದಪುರ, ಹೊಸನಗರ, ಕೋಣಂದೂರು, ತುಮರಿ ಬ್ಯಾಕೋಡು ಸುತ್ತಮುತ್ತ ಗಾಳಿ ಸಹಿತ ಜೋರು ಮಳೆಯಾಗಿದೆ.
ಆನವಟ್ಟಿಯಲ್ಲಿ 1 ಗಂಟೆಗಳ ಕಾಲ ಸುರಿದ ಮಳೆಗೆ ಚರಂಡಿ ನೀರು ರಸ್ತೆ ಮೇಲೆ ಹರಿದಿದೆ. ಇದರಿಂದ ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸವಾರರು ಪರದಾಡಿದರು. ಹಲವಡೆ ವಿದ್ಯುತ್ ವ್ಯತ್ಯಯವಾಗಿ ತೊಂದರೆ ಅನುಭವಿಸಿದರು.
ರಾಜ್ಯದಲ್ಲಿ ಇನ್ನೂ 5 ದಿನ ಭಾರಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಗೆ ಸಿದ್ಧತೆ ನಡೆದಿದೆ.