ಹೊಂಬುಜ (ರಿಪ್ಪನ್ಪೇಟೆ):ಜೈನ ಧರ್ಮದ ಪುರಾತನ ಇತಿಹಾಸ, ಪರಂಪರೆ ಜತೆಗೆ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಪ್ರತಿ ಘಟನೆಯನ್ನೂ ದಾಖಲಿಸುವುದು ವರ್ತಮಾನದ ಅಗತ್ಯ ಎಂದು ಹೊಂಬುಜ ಜೈನ ಮಠದ ಪೀಠಾಧಿಕಾರಿ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ಹೇಳಿದರು.
ಕರ್ನಾಟಕ ರಾಜ್ಯ ಜೈನ ಪುರಾತತ್ವ ಹಾಗೂ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಎರಡು ದಿನಗಳ ಕ್ಷೇತ್ರ ಕಾರ್ಯಾವಲಂಬಿತ ಕಾರ್ಯಾಗಾರಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಸಮಾಜವನ್ನು ಮುನ್ನಡೆಸಿ, ಮಾರ್ಗದರ್ಶನಗೈದ ಭಟ್ಟಾರಕರ ಪರಂಪರೆಯನ್ನು ದಾಖಲೀಕರಿಸುವ ಮಹತ್ವದ ಬಗ್ಗೆ ಸ್ವಾಮೀಜಿ ವಿವರಿಸಿದರು.
ಪರಿಷತ್ತಿನ ಅಧ್ಯಕ್ಷ ಹಾಗೂ ಗೆಜೆಟಿಯರ್ ಯೋಜನೆಯ ಸಂಯೋಜಕ ಡಾ.ಅಜಿತ ಮುರುಗುಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಯೋಜನೆ ನಿರ್ದೇಶಕ ಡಾ.ಅಪ್ಪಣ್ಣ ಎನ್.ಹಂಜೆ, ಯೋಜನೆಯ ರೂಪುರೇಷೆಗಳು ಹಾಗೂ ಶ್ರೀಕ್ಷೇತ್ರದ ಜೈನ ಶಾಸನಗಳು, ಬಸದಿಗಳು ಹಾಗೂ ಶಿಲ್ಪಗಳಿಗೆ ಸಂಬಂಧಿಸಿದಂತೆ ಕೈಗೊಳ್ಳಲಿರುವ ಕ್ಷೇತ್ರಕಾರ್ಯದ ರೂಪುರೇಷೆಗಳ ಬಗ್ಗೆ ವಿವರಿಸಿದರು.
ಶಾಸನ ತಜ್ಞರಾದ ಹುಬ್ಬಳ್ಳಿಯ ಹನುಮಾಕ್ಷಿ ಗೋಗಿ, ಇತಿಹಾಸ ಸಂಶೋಧಕ ಡಾ. ಸಂಕಂ ಗೋವರ್ಧನ ಸೇರಿ ರಾಜ್ಯದ ವಿವಿಧೆಡೆಯಜೈನ ಸಂಶೋಧಕರು ಭಾಗವಹಿಸಿದ್ದರು.