ಸಾಗರ: ಪೊಳ್ಳು ಮಾರ್ಗವನ್ನು ಅನುಸರಿಸದೆ ಸತ್ಯದ ಹಾದಿಯಲ್ಲೇ ಸ್ವಾತಂತ್ರ್ಯ ಚಳವಳಿಯನ್ನು ಕಟ್ಟಿದ ಗಾಂಧಿಯ ಕ್ರಮ ಅಸಾಧಾರಣವಾದದ್ದು ಎಂದು ಕವಯತ್ರಿ ಮಮತಾ ಅರಸಿಕೆರೆ ಹೇಳಿದರು.
ತಾಲ್ಲೂಕಿನ ತುಮರಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಅಭಿವ್ಯಕ್ತಿ ಬಳಗ ಏರ್ಪಡಿಸಿದ್ದ ಹಾ.ಮ. ಭಟ್ಟ ನೆನಪಿನ ಸಂಸ್ಕೃತಿ ಹಬ್ಬದಲ್ಲಿ ಭಾನುವಾರ ನಡೆದ ‘ನಮ್ಮೊಳಗಿನ ಗಾಂಧಿ’ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಯಾರು ಎಷ್ಟೇ ನಿರಾಕರಿಸಿದರೂ ಪ್ರಬಲವಾಗಿ ನಮ್ಮನ್ನು ಆವರಿಸಿಕೊಳ್ಳುತ್ತಲೇ ಹೋಗುವ ವ್ಯಕ್ತಿತ್ವ ಗಾಂಧಿಯದ್ದು. ಇಂತಹ ವ್ಯಕ್ತಿಯ ಕುರಿತು ಅವಹೇಳನಕಾರಿ ಧ್ವನಿ ಕೇಳಿಬರುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದರು.
ಮನುಷ್ಯ ತನ್ನ ಸಹಜ ದೌರ್ಬಲ್ಯಗಳನ್ನು ಮೀರಿ ಹೇಗೆ ಮಹಾತ್ಮನಾಗಬಹುದು ಎಂಬುದನ್ನು ತೋರಿಸಿಕೊಟ್ಟಿದ್ದು ಗಾಂಧಿಯ ಹೆಗ್ಗಳಿಕೆ ಎಂದುಕವಯತ್ರಿ ಹೇಮಲತಾ ವಸ್ತ್ರದ ಹೇಳಿದರು.
‘ಗಾಂಧಿ ಬಾಳಿ ಬದುಕಿದ ರೀತಿಯೇ ಒಂದು ಅತ್ಯುತ್ತಮ ಮಾದರಿಯ ಸ್ವರೂಪದಲ್ಲಿದೆ’ ಎಂದುರಂಗಕರ್ಮಿ ಕೆ.ಜಿ. ಕೃಷ್ಣಮೂರ್ತಿ ಬಣ್ಣಿಸಿದರು.
ಲೇಖಕ ಜಯಪ್ರಕಾಶ್ ಮಾವಿನಕುಳಿ, ರಂಗಕರ್ಮಿ ಪ್ರಸಾದ್ ರಕ್ಷಿದಿ, ಕೃಷಿಕ ರಾಜು ಸಾಲೆಕೊಪ್ಪಮಾತನಾಡಿದರು.