ಸಾಗರ: ‘ಭೂ ರಹಿತರಿಗೆ ಭೂಮಿಯ ಹಕ್ಕು ಕೊಡಿಸುವಲ್ಲಿ ಈಗಿನ ಯಾವ ಶಾಸಕರಲ್ಲೂ ಈ ಹಿಂದೆ ಕಾಣುತ್ತಿದ್ದ ಇಚ್ಛಾಶಕ್ತಿ ಇಲ್ಲವಾಗಿದೆ’ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪ್ರೆಸ್ ಟ್ರಸ್ಟ್ ಆಫ್ ಸಾಗರ ಬುಧವಾರ ಏರ್ಪಡಿಸಿದ್ದ ‘ಹೊಲ-ನೆಲ, ಅರಸು ಕೊಡುಗೆ’ ಎಂಬ ವಿಷಯದ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಗೋಡು ಸತ್ಯಾಗ್ರಹದ ಪ್ರತಿಫಲನದ ರೂಪವಾಗಿ ಭೂ ಸುಧಾರಣಾ ಕಾಯ್ದೆ ಜಾರಿಗೆ ಬರುವಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಇದ್ದ ಇಚ್ಛಾಶಕ್ತಿಯೇ ಪ್ರಮುಖ ಕಾರಣವಾಗಿದೆ. ಸಾಮಾಜಿಕ ಬದಲಾವಣೆಯ ತುಡಿತ ಕೂಡ ಅವರಲ್ಲಿ ತೀವ್ರವಾಗಿತ್ತು. ಇಂದಿನ ರಾಜಕಾರಣದಲ್ಲಿ ಅಂತಹ ತುಡಿತ ಕಾಣೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಭೂ ಸುಧಾರಣಾ ಕಾಯ್ದೆಯ ಮೂಲಕ ಹಾಗೂ ನಂತರ ಬಗರ್ಹುಕುಂ ಕಾಯ್ದೆಯ ಮೂಲಕ ಭೂ ರಹಿತರಿಗೆ ಭೂಮಿಯ ಹಕ್ಕು ಕೊಡಿಸಿದ್ದು ನನ್ನ ರಾಜಕೀಯ ಜೀವನದಲ್ಲಿ ಹೆಚ್ಚು ತೃಪ್ತಿ ಕೊಟ್ಟಿರುವ ಕೆಲಸವಾಗಿದೆ. ಆದರೆ, ಇಂದಿನ ಯುವ ತಲೆಮಾರಿನವರಿಗೆ ತಮ್ಮ ಪೂರ್ವಿಕರಿಗೆ ಭೂಮಿಯ ಹಕ್ಕು ಕೊಡಿಸಿದ ವಿಷಯ ಪ್ರಮುಖವಾಗಿ ಕಾಣದೇ ಇರುವುದು ಆಶ್ಚರ್ಯ ತರುವ ಸಂಗತಿಯಾಗಿದೆ. ಭೂಮಿಯ ಹಕ್ಕು ಕೊಡಿಸಿದ್ದು ನನ್ನ ರಾಜಕೀಯ ಉನ್ನತಿಗೆ ಕಾರಣವಾದಂತೆ ಹಿನ್ನಡೆಗೂ ಸಾಕಷ್ಟು ಕೊಡುಗೆ ನೀಡಿರುವುದು ವಿಪರ್ಯಾಸ’ ಎಂದರು.
ಕಾಗೋಡು ತಿಮ್ಮಪ್ಪ ಅವರನ್ನು ಸನ್ಮಾನಿಸಲಾಯಿತು. ಸಾಗರದ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎಚ್.ವಿ.ರಾಮಚಂದ್ರ ರಾವ್, ಕಾರ್ಯದರ್ಶಿ ಎಸ್.ವಿ.ಹಿತಕರ ಜೈನ್, ರಮೇಶ್ ಹೆಗಡೆ ಗುಂಡೂಮನೆ, ಗಣಪತಿ ಶಿರಳಗಿ, ರಮೇಶ್ ಇದ್ದರು.