ಶಿವಮೊಗ್ಗ: ‘ಕನ್ನಡತನ ಹೊಂದಿದ ಧಣಿವರಿಯದ ಸಂಘಟಕ’ ಡಿ.ಮಂಜುನಾಥ ಎಂದು ಕುವೆಂಪು ವಿಶ್ವವಿದ್ಯಾಲಯ ಕನ್ನಡ ಭಾರತಿ ಮುಖ್ಯಸ್ಥ ಡಾ.ಪ್ರಶಾಂತ ನಾಯಕ ಅಭಿಪ್ರಾಯಪಟ್ಟರು.
ಕಸಾಪ ಪದಾಧಿಕಾರಿಗಳ ಆಯ್ಕೆಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಸಾಹಿತ್ಯ ಗ್ರಾಮದಲ್ಲಿ ಆಯೋಜಿಸಿದ್ದ ‘ಹಿಂದಣ ನಡೆ – ಮುಂದಣ ಹೆಜ್ಜೆ’ ಅವಲೋಕನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಒಂದು ವರ್ಷದ ಕಾರ್ಯ ಚಟುವಟಿಕೆಗಳ ಅವಲೋಕನ ಮಾಡಿಕೊಳ್ಳುವ ಉದಾರತೆಯನ್ನು ಶಿವಮೊಗ್ಗ ಸಾಹಿತ್ಯ ಪರಿಷತ್ತು ತೋರಿಸುತ್ತಿ ರುವುದು ಅಭಿನಂದನಾರ್ಹ. ಅಂತಹ ವಿಶಾಲತೆ ಕನ್ನಡ ಸಂಘಟಕರಿಗೆ ಅವಶ್ಯಕ. ಶಾಲಾ ಕಾಲೇಜುಗಳಲ್ಲಿ ಕಾರ್ಯಾಗಾರಗಳನ್ನು ಸಂಘಟಿಸುವಾಗ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ತುಂಬಲು ಯಶಸ್ವಿಯಾಗದಿರಬಹುದು, ಅದೇರೆ ಒಂದಷ್ಟು ಮಕ್ಕಳ ಮನಸ್ಸುಗಳು ಸೃಜನಶೀಲ ವ್ಯಕ್ತಿತ್ವದೊಂದಿಗೆ ಖಂಡಿತ ಹೊರಹೊಮ್ಮಲಿದೆ. ಆಧುನಿಕತೆಯ ಅವಶ್ಯಕತೆಗಳಿಗೆ ಅನುಗುಣವಾಗಿ ಸಾಹಿತ್ಯ ಹೇಳುವ ಕೇಳುವ ನಿರೂಪಿಸುವ ಕ್ರಮಗಳು ಬದಲಾಗಬೇಕಾದ ತುರ್ತಿದೆ. ಅಂತಹ ಅನೇಕ ಆಧುನಿಕ ಕ್ರಮಗಳು ಅಳವಡಿಕೆ, ಕನ್ನಡ ಸಾಹಿತ್ಯ ಪರಿಷತ್ತಿನ ಮುಂದಣ ಹೆಜ್ಜೆಯಾಗಲಿ ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲರಾದ ಡಾ.ಎಚ್.ಟಿ. ಕೃಷ್ಣಮೂರ್ತಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ರತ್ನಾಕರ ಕುನುಗೋಡು ಸಂಯೋಜಿಸಿದರು. ಉದ್ಯಮಿ ಹರ್ಷಾ ಕಾಮತ್, ಕಲಾವಿದ ಭದ್ರಾವತಿ ಗುರು, ಸಾಹಿತಿ ನಾಗರಕೋಡಿಗೆ ಗಣೇಶಮೂರ್ತಿ, ರಾಮಕೃಷ್ಣ ವಿದ್ಯಾಸಂಸ್ಥೆ ಕಾರ್ಯದರ್ಶಿ ಶೋಭಾ ವೆಂಕಟರಮಣ, ಜೀವ ವೈವಿಧ್ಯ ಮಂಡಳಿ ಸದಸ್ಯರಾದ ವೆಂಕಟೇಶ್ ಕವಲುಕೋಡು, ಆನವಟ್ಟಿ ಯವರನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕಾರ್ತಿಕ್ ಸಾಹುಕಾರ್, ವಿದ್ಯಾರ್ಥಿನಿ ಅಚಿಂತ್ಯಾ, ವಿದ್ಯಾರ್ಥಿ ಭರತ್ ಮಾತನಾಡಿದರು. ಮಂಜಪ್ಪ ಸ್ವಾಗತಿಸಿ, ಎಂ.ಎಂ.ಸ್ವಾಮಿ ವಂದಿಸಿ, ಮಹಾದೇವಿ ನಿರೂಪಿಸಿದರು.
***
ಮುಂದಣ ಹೆಜ್ಜೆಯಲ್ಲಿ ಕೇಳಿಸಿದ ಭವಿಷ್ಯದ ಯೋಜನೆಗಳು
l ಕಾರ್ಮಿಕರಿಗೆ ಕನ್ನಡದ ಸಾಹಿತ್ಯ ಸಾಂಸ್ಕೃತಿಕ ಚಿಂತನೆಗಳಿಗೆ ಪೂರಕ ವೇದಿಕೆ ನಿರ್ಮಾಣ
l ಬೃಹತ್ ಸದಸ್ಯತ್ವ ಅಭಿಯಾನ
l ಗ್ರಾಮೀಣ ಕಲಾವಿದರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವುದು
l ಸಾಹಿತ್ಯ ಗ್ರಾಮಕ್ಕೆ ಮತ್ತಷ್ಟು ತಾಂತ್ರಿಕ ಸ್ಪರ್ಶ
l ಶಾಲೆಗಳಲ್ಲಿ ಜಾನಪದ ಕಲಿಕಾ ಶಿಬಿರ
l ಎಲ್ಲಾ ತಾಲ್ಲೂಕುಗಳಲ್ಲಿ ಶಿಕ್ಷಕರ ಕಾರ್ಯಾಗಾರ
l ವಿದ್ಯಾರ್ಥಿಗಳಿಗೆ ಕನ್ನಡ ಬರವಣಿಗೆ ಸುಧಾರಣೆ ಕಾರ್ಯಕ್ರಮ
l ತಾಳಗುಂದದ ಇತಿಹಾಸ ರಾಜ್ಯದಲ್ಲಿ ಮತ್ತಷ್ಟು ಮೇಳೈಸುವ ಕಾರ್ಯಕ್ರಮ
l ಸಾಹಿತ್ಯ ಸೃಜನಶೀಲತೆಯನ್ನು ತಲುಪಿಸಲು ತೆರೆದ ತಂತ್ರಾಂಶ ಬಳಕೆ
l ಕಲಾವಿದರ ದತ್ತಾಂಶಗಳ ನಿರ್ವಹಣೆ
l ನಿರೂಪಣಾ ಕ್ರಮಾವಳಿಗಳ ಕುರಿತ ಕಾರ್ಯಾಗಾರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.