ಹೊಸನಗರ: ಸಾಗರ ವಿಧಾನಸಭಾ ಕೇತ್ರದಲ್ಲಿ ವಿಜಯ ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಅವರ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಜರಂಗಿ ಹಾಡು.. ಕೇಸರಿ ಶಾಲು, ಹಾಡು, ಕುಣಿತ ಗಮನಸೆಳೆದವು.
ಪಟ್ಟಣದ ಬಸ್ ನಿಲ್ದಾಣ ಆವರಣದಲ್ಲಿ ಶನಿವಾರ ಸಂಜೆ ನಡೆದ ವಿಜಯೋತ್ಸವ ಮತ್ತು ಮೆರವಣಿಗೆ ತುಂಬೆಲ್ಲ ಬಜರಂಗಿ ಹಾಡಿನದ್ದೇ ಸದ್ದು. ಸಾವಿರಾರು ಜನರ ಮಧ್ಯೆ ತೆರೆದ ವಾಹನದಲ್ಲಿ ಬೇಳೂರು ಗೋಪಾಲಕೃಷ್ಣ ಅವರ ಮೆರವಣಿಗೆ ನಡೆಯಿತು. ಕಿವಿಗಡಚಿಕ್ಕುವ ಡಿಜೆ ಸೌಂಡ್ನಲ್ಲಿ ಜೈ ಭಜರಂಗಿ ಹಾಡಿಗೆ ಕೇಸರಿ ಧ್ವಜ, ಕೇಸರಿ ಶಾಲು ಧರಿಸಿದ ಬೇಳೂರು ಅಭಿಮಾನಿಗಳು ಹೆಜ್ಜೆ ಹಾಕಿದರು.
ಪಟ್ಟಣದ ವಿವಿಧೆಡೆ ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿದರು. ರಂಗು ರಂಗಿನ ಪಟಾಕಿಯಿಂದ ಬಾನಂಗಳದಲ್ಲಿ ಬೆಳಕಿನ ಚಿತ್ತಾರವನ್ನು ಮೂಡಿಸಿದರು.
ರಿಪ್ಪನ್ಪೇಟೆಯಿಂದ ಸಂಜೆ ಹೊರಟ ವಿಜಯೋತ್ಸವ ಮೆರವಣಿಗೆ ದಾರಿಯುದ್ದಕ್ಕೂ ಅಭಿಮಾನಿಗಳಿಂದ ಗೌರವ ಸ್ವೀಕರಿಸಿ ಹೊಸನಗರ ಬಸ್ ನಿಲ್ದಾಣದ ಆವರಣದಲ್ಲಿ ಸಮಾವೇಶಗೊಂಡಿತು.
ಜನರ ಪ್ರೀತಿ ದೊಡ್ಡದು: ಅಭಿಮಾನಿಗಳ, ಕಾರ್ಯಕರ್ತರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ‘ಅಭಿಮಾನಿಗಳ ಪ್ರೀತಿಗೆ ನಾನು ಎಂದಿಗೂ ಋಣಿಯಾಗಿದ್ದೇನೆ. ಜನರ ಪ್ರೀತಿ ದೊಡ್ಡದು. ಆವರ ಪ್ರೀತಿಗೆ ದ್ರೋಹ ಬಗೆಯಲಾರೆ. ಹಣಬಲದ ಎದುರು ಜನಬಲಕ್ಕೆ ಜಯ ಲಭಿಸಿದೆ. ಪಕ್ಷದ ಕಾರ್ಯಕರ್ತರು ಹಗಲಿರುಳು ದುಡಿದು ಜಯವನ್ನು ತಂದು ಕೊಟ್ಟಿದ್ದಾರೆ. ಜನರ ಆಶೀರ್ವಾದಕ್ಕೆ ಯಾವತ್ತೂ ಮೋಸ ಮಾಡಲಾರೆ’ ಎಂದು ಹೇಳಿದರು.
ಮೆರವಣಿಗೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಪ್ರಮುಖರಾದ ಕಲಗೋಡು ರತ್ನಾಕರ್, ಜಯಶೀಲಪ್ಪಗೌಡ, ವಿನಯ್ಕುಮಾರ್ ದುಮ್ಮ, ಸಣ್ಣಕ್ಕಿ ಮಂಜು, ಬಸವರಾಜ್ ಗಗ್ಗ, ಅಶ್ವಿನಿ, ಬಾವಿಕಟ್ಟೆ ಸತೀಶ್, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಸದಾಶಿವ ಶೆಟ್ಟಿ, ಇಟಾಚಿ ಶ್ರೀಧರ್ ಇದ್ದರು.