ಭದ್ರಾವತಿ:ವರ್ಷದಿಂದ ವರ್ಷಕ್ಕೆ ಭದ್ರಾ ಜಲಾಶಯದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತವಾಗಿದ್ದು, ಇದು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ರೈತ ಮುಖಂಡ ಕೆ.ಟಿ. ಗಂಗಾಧರ್ ದೂರಿದರು.
ಭದ್ರಾ ಜಲಾಶಯಕ್ಕೆ ಗುರುವಾರ ರೈತ ಸಂಘದಿಂದ ಹಮ್ಮಿಕೊಂಡಿದ್ದ ಬಾಗಿನ ಅರ್ಪಣೆ ಕಾರ್ಯಕ್ರಮದ ನಂತರ ಅವರು ಮಾತನಾಡಿದರು.
ಜಲಾಶಯದಿಂದ ಹೊರಬಿದ್ದ ನೀರು ತಳಕ್ಕೆ ಬಿದ್ದ ರಭಸವನ್ನು ತಡೆಯಲು ಸ್ಟೀಲ್ ಬೇಸಿನ್ ಹಾಕಬೇಕಿದ್ದು, ಆ ಕಾಮಗಾರಿ ಐದು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಇದರಿಂದ ಈ ಬಾರಿಯ ನೀರಿನ ರಭಸಕ್ಕೆ ಜಲಾಶಯ ಪಕ್ಕದ ಗುಡ್ಡದ ಒಂದು ಭಾಗ ಕುಸಿದಿದೆ. ಇದು ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಆರೋಪಿಸಿದರು.
ಕಳೆದ ಸಾಲಿನಲ್ಲಿ ನೀರು ಪೂರ್ಣ ಖಾಲಿಯಾಗದ ಹಿನ್ನೆಲೆಯಲ್ಲಿ ಕಾಮಗಾರಿ ಸಮರ್ಪಕ ನಡೆದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಕಾಮಗಾರಿ ಪೂರ್ಣಗೊಳಿಸುವ ಜವಾಬ್ದಾರಿ ಹೊತ್ತ ಎಂಜಿನಿಯರ್ಗಳು ಇದರ ಕುರಿತಾಗಿ ಯೋಜನೆ ರೂಪಿಸಿ ಕೆಲಸ ಮಾಡಬೇಕು. ಕೃಷಿಕರೂ ಬೇಸಿಗೆ ವೇಳ ಜಲಾಶಯ ನೀರನ್ನು ಸಂರಕ್ಷಿಸಬೇಕು.ಕೆರೆ ಅಭಿವೃದ್ಧಿ ಸಂರಕ್ಷಣೆ ಯೋಜನೆಯಡಿ ಗ್ರಾಮ ಪಂಚಾಯಿತಿ ಸದಸ್ಯರು, ರೈತ ಮುಖಂಡರು ಗ್ರಾಮದ ಕೆರೆಗಳನ್ನು ರಕ್ಷಿಸಿ ಅಲ್ಲಿ ಬರುವ ಜಲಾಶಯ ನೀರನ್ನು ಸಂಗ್ರಹಿಸಬೇಕು ಎಂದು ಸಲಹೆ ನೀಡಿದರು.
ಶಿವಮೊಗ್ಗ, ದಾವಣೆಗೆರೆ, ಚಿತ್ರದುರ್ಗ, ಹಾವೇರಿ ಭಾಗದ ರೈತ ಸಂಘದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. ವೀರೇಶ್, ಮೋಹನ್, ಯಶವಂತರಾವ್ ಘೋರ್ಫಡೆ, ರಂಗಪ್ಪ, ಮಂಜಣ್ಣ, ತಿಪ್ಪೇಸ್ವಾಮಿ, ಮಂಜುನಾಥ ಇದ್ದರು.