ಶಿವಮೊಗ್ಗ: ಮಗಳ ಹುಟ್ಟುಹಬ್ಬದ ಔತಣಕೂಟದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಲು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ವಿ.ವೀರಭದ್ರಪ್ಪ ಹೊರಡಿಸಿರುವ ಸುತ್ತೋಲೆ ಈಗ ಚರ್ಚೆಗೆ ಗ್ರಾಸವಾಗಿದೆ.
ಮೇ 28ರಂದು ಮಗಳು ಬಿ.ವಿ.ಆಕಾಂಕ್ಷ ಅವರ ಹುಟ್ಟುಹಬ್ಬದ ಔತಣಕೂಟದಲ್ಲಿ ಪಾಲ್ಗೊಳ್ಳುವಂತೆ ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ಕುಲಪತಿ ಆಹ್ವಾನಿಸಿದ್ದಾರೆ. ಅದಕ್ಕಾಗಿ ವಿಶ್ವವಿದ್ಯಾಲಯದ ಅಧಿಕೃತ ಲೆಟರ್ ಹೆಡ್ನಲ್ಲಿ ಸುತ್ತೋಲೆ ಹೊರಡಿಸಿದ್ದಾರೆ. ಅದು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.
'ಕುಲಪತಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ವೈಯುಕ್ತಿಕ ಆಹ್ವಾನಕ್ಕೆ ವಿಶ್ವವಿದ್ಯಾಲಯದ ಲೆಟರ್ ಹೆಡ್ ದುರ್ಬಳಕೆ ಮಾಡಿಕೊಂಡಿರುವುದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
'ಅದು ಸುತ್ತೋಲೆಯಲ್ಲ. ಕರೆಯೋಲೆ ಮಾತ್ರ. ವಿವಿಯ ಎಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಗಳನ್ನು ಹರಸಲಿ ಎಂಬ ಉದ್ದೇಶದಿಂದ ಆತ್ಮೀಯವಾಗಿ ಕರೆದಿದ್ದೆನು. ಹೀಗಾಗಿ ಅದನ್ನು ವಿವಾದವಾಗಿಸುವ ಅಗತ್ಯವಿಲ್ಲ' ಎಂದು ಕುಲಪತಿ ಪ್ರೊ.ಬಿ.ವಿ.ವೀರಭದ್ರಪ್ಪ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.
ಕುಲಪತಿಯ ಸುತ್ತೋಲೆ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನ ನಡೆದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಹಲವು ನೌಕರರು ಪಾಲ್ಗೊಂಡಿದ್ದರು.