ಶಿವಮೊಗ್ಗ: ಜನಸಾಮಾನ್ಯರಿಗೆ ಯೋಜನೆಗಳ ಮಾಹಿತಿ ತಲುಪಿಸುವ ಜತೆಗೆ, ಅವುಗಳ ಪ್ರಯೋಜನವೂ ಸಿಗುವಂತೆ ನಿಗಾವಹಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದ ಶಿವಪ್ಪ ನಾಯಕ ವೃತ್ತದಲ್ಲಿ ‘ಪ್ರಧಾನಮಂತ್ರಿ ಜನ ಕಲ್ಯಾಣ’ ಯೋಜನಾ ಪ್ರಚಾರ, ಪ್ರಸಾರ ಅಭಿಯಾನ ಉದ್ಘಾಟಿಸಿ, ಪೋಸ್ಟರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
ರೈತರು, ಯುವಕರು, ಮಹಿಳೆಯರು ಸೇರಿ ಎಲ್ಲ ವರ್ಗದ ಜನರಿಗೆ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಹಲವರಿಗೆ ಯೋಜನೆಗಳ ಮಾಹಿತಿ ಇರುವುದಿಲ್ಲ. ಪ್ರಧಾನಮಂತ್ರಿ ಜನಕಲ್ಯಾಣ ಯೋಜನಾ ಅಭಿಯಾನದ ಮೂಲಕ ಅರ್ಹರಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ವಾರ್ಷಿಕ ₹ 6 ಸಾವಿರ ನೀಡಲಾಗುತ್ತದೆ. ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರಿಗೆ ಸೌಲಭ್ಯ, ಯುವಕರಿಗೆ ಕೌಶಲಾಭಿವೃದ್ಧಿ ಯೋಜನೆ, ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ ಸೇರಿ ಹಲವು ಯೊಜನೆಗಳ ಮಾಹಿತಿ ಜನರಿಗೆ ತಿಳಿಸಬೇಕು. ಇಲಾಖೆಗಳ ಮೂಲಕ ಫಲಾನುಭವಿಗಳಿಗೆ ಸಂಪರ್ಕ ಕಲ್ಪಿಸಬೇಕು ಎಂದು ಅವರು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಇ. ಕಾಂತೇಶ್, ಅಭಿಯಾನ ಜಿಲ್ಲಾ ಘಟಕದ ಮುಖ್ಯ ಸಂಘಟನಾ ಕಾರ್ಯದರ್ಶಿ ಎಸ್. ರಘುಪತಿ, ಕಾರ್ಯದರ್ಶಿಗಳಾದ ಸುನಿಲ್ ಕುಮಾರ್, ವರುಣ್, ಸುರೇಶ್, ಗಣೇಶ್, ಮೊಹಮ್ಮದ್ ಪಸೀವುಲ್ಲಾ, ಹಿರಣ್ಣಯ್ಯ ಇದ್ದರು.