ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ| ಸಂತ್ರಸ್ತರ ಮೇಲಿನ ದೌರ್ಜನ್ಯ ನಿಲ್ಲಲಿ: ಮಧು ಬಂಗಾರಪ್ಪ

ತಾಳಗುಪ್ಪ: ಅಡಿಕೆ ತೋಟ ತೆರವಿಗೆ ಮಧು ಬಂಗಾರಪ್ಪ ಆಕ್ರೋಶ
Last Updated 24 ಮಾರ್ಚ್ 2023, 5:25 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಒತ್ತುವರಿ ತೆರವು ನೆಪದಲ್ಲಿ ಅರಣ್ಯ ಇಲಾಖೆಯು ಶರಾವತಿ ಮುಳುಗಡೆ ಸಂತ್ರಸ್ತರ ಮೇಲೆ ದೌರ್ಜನ್ಯ ನಡೆಸುತ್ತಿದೆ. ಆ ಬಗ್ಗೆ ಬಿಜೆಪಿ ನಾಯಕರು ಮಾತಾಡುತ್ತಿಲ್ಲವೇಕೆ’ ಎಂದು ಕೆ‍ಪಿಸಿಸಿ ಹಿಂದುಳಿದ ವರ್ಗಗಳ ಸಮಿತಿ ಅಧ್ಯಕ್ಷ ಮಧು ಬಂಗಾರಪ್ಪ
ಪ್ರಶ್ನಿಸಿದರು.

ತಾಳುಗುಪ್ಪದಲ್ಲಿ 20 ಎಕರೆ ಬೆಳೆದು ನಿಂತ ಅಡಿಕೆ ಮರಗಳನ್ನು ಬುಡಸಮೇತ ಉರುಳಿಸಲಾಗಿದೆ. ಮುಂದೆ ಅದು 2 ಲಕ್ಷ ಎಕರೆಗೆ ಹೆಚ್ಚಳವಾಗಬಹುದು. ಅದಕ್ಕೂ ಮುನ್ನ ಮಲೆನಾಡಿನ ಜನರು ಎಚ್ಚೆತ್ತುಕೊಳ್ಳಬೇಕಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಲೆನಾಡಿನಲ್ಲಿನ ಮುಳುಗಡೆ ಸಂತ್ರಸ್ತರು, ಬಗರ್‌ಹುಕುಂ ಸಮಸ್ಯೆಗಳನ್ನು 15 ದಿನಗಳೊಳಗೆ ಪರಿಹರಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದ್ದರು. ಇನ್ನೂ ಅದನ್ನು ಈಡೇರಿಸಿಲ್ಲವೇಕೆ ಎಂದೂ ಅವರು ಪ್ರಶ್ನಿಸಿದರು.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮಲೆನಾಡಿನಲ್ಲಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳು ಮಿತಿಮೀರಿವೆ.
ಸಾಗುವಳಿ ಮಾಡುವ ರೈತರ ಬದುಕು ಹದಗೆಟ್ಟಿದೆ. ಶರಾವತಿ ಸಂತ್ರಸ್ತರು ಕಣ್ಣೀರು ಹಾಕುತ್ತಿದ್ದಾರೆ. ಸೊರಬ ಭಾಗದಲ್ಲೂ ರೈತರು 30 ವರ್ಷಗಳಿಂದ ಕಟ್ಟಿ ಬೆಳೆಸಿದ್ದ ತೋಟಗಳು ಸಂಪೂರ್ಣ ನಾಶವಾಗಿವೆ ಎಂದು ಆರೋಪಿಸಿದರು.

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಶರಾವತಿ ಸಂತ್ರಸ್ತರ ಸಮಸ್ಯೆಯನ್ನೂ ಬಗೆಹರಿಸುವ ಗ್ಯಾರಂಟಿ ನೀಡುತ್ತದೆ ಎಂದರು.

‘ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಏನೆಲ್ಲಾ ಭರವಸೆ ನೀಡಿತ್ತು. ವಿಐಎಸ್ಎಲ್ ಕಾರ್ಖಾನೆ ಮುಚ್ಚಲು ಬಿಡುವುದಿಲ್ಲ. ಸಂತ್ರಸ್ತರ ಪರವಾಗಿ ನಿಲ್ಲುತ್ತೇವೆ. ಭೂಮಿ ಹಕ್ಕು ಕೊಡುತ್ತೇವೆ ಎಂದೆಲ್ಲಾ ಭರವಸೆ ನೀಡಿದ್ದರು. ಆದರೆ, ಏಕೆ ಕೊಟ್ಟಿಲ್ಲ’ ಎಂದರು.

‘ಕಾಂಗ್ರೆಸ್‌ ಮೂಡಿಸಿರುವ ಸಂಚಲನದಿಂದ ಬಿಜೆಪಿಯವರು ಹೆದರಿದ್ದಾರೆ. ಅವರು ಈಗ ತಮ್ಮ ತಾಕತ್ತು ಕಳೆದುಕೊಂಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ. ಅಷ್ಟೇ ಅಲ್ಲ, ಮಲೆನಾಡು ಭಾಗದ ರೈತರ ಸಮಸ್ಯೆ ಬಗೆಹರಿಸುತ್ತೇವೆ’ ಎಂದು ಭರವಸೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್‌.ಎಸ್. ಸುಂದರೇಶ್, ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನಕುಮಾರ್, ಆರ್. ಪ್ರಸನ್ನಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎನ್. ರಮೇಶ್, ಮಹಾನಗರ ಪಾಲಿಕೆ ಸದಸ್ಯ ಎಚ್.ಸಿ. ಯೋಗೀಶ್, ಪ್ರಮುಖರಾದ ಜಿ.ಡಿ. ಮಂಜುನಾಥ್, ರಮೇಶ್ ಶಂಕರಘಟ್ಟ, ಕಲಗೋಡು ರತ್ನಾಕರ್, ಚಂದ್ರಭೂಪಾಲ್ ಇದ್ದರು.

ಸೊರಬ ಭಾಗದ ರೈತರ ಸಮಸ್ಯೆಯನ್ನು ಬಗೆಹರಿಸಬೇಕು. ಕೂಡಲೇ ಅವರ ತೋಟಗಳನ್ನು ಧ್ವಂಸ ಮಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಹೋರಾಟ ತೀವ್ರಗೊಳಿಸುತ್ತದೆ.

–ಮಧು ಬಂಗಾರಪ್ಪ, ಅಧ್ಯಕ್ಷ, ಕೆಪಿಸಿಸಿ ಹಿಂದುಳಿದ ವರ್ಗಗಳ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT