ಶಿವಮೊಗ್ಗ: ‘ಹದಗೆಟ್ಟ ಇಂದಿನ ವ್ಯವಸ್ಥೆಯಲ್ಲಿ ಧೈರ್ಯವಾಗಿ ಹಾಗೂ ನಿಷ್ಠುರವಾಗಿ ಮಾತನಾಡುವುದು ಅಗತ್ಯ. ಸಮಾಜದಲ್ಲಿ ದುಷ್ಟ ಶಕ್ತಿಗಳು ವಿಜೃಂಭಿಸುತ್ತಿರುವ ಈ ಹೊತ್ತಿನಲ್ಲಿ ಗಟ್ಟಿ ದನಿಯಲ್ಲಿ ಮಾತನಾಡುವುದು ಅಗತ್ಯ’ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಅಹರ್ನಿಶಿಪ್ರಕಾಶನದಿಂದ ಆಯೋಜಿಸಿದ್ದ ಪುರುಷೋತ್ತಮ ಬಿಳಿಮಲೆ ಅವರ ಆತ್ಮಕಥೆ ‘ಕಾಗೆ ಮುಟ್ಟಿದ ನೀರು’ (ನಾಲ್ಕನೇ ಮುದ್ರಣ) ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಪುಸ್ತಕದಲ್ಲಿ ಅವರು ಒಂಟಿ ಧ್ವನಿಯಾಗಿದ್ದಾರೆ. ಸಮಾಜದಲ್ಲಿ ಗಟ್ಟಿ ಧ್ವನಿಯಾಗಿ ಮಾತನಾಡುವ ಕಡಿಮೆ ಜನರಲ್ಲಿ ಒಬ್ಬರಾಗಿದ್ದಾರೆ. ಇದು ಹೆಮ್ಮೆಯ ಸಂಗತಿ.ಕೃತಿಯಲ್ಲಿ ಬರಹದ ಮೂಲಕ ಸತ್ಯ ಹಾಗೂ ವಾಸ್ತವ ಅಂಶ ಅನಾವರಣಗೊಳಿಸಿದ್ದಾರೆ ಎಂದರು.
‘ತಾವು ಬದುಕಿನುದ್ದಕ್ಕೂ ನಡೆದ ಹಾದಿಯ ಸಂಕೀರ್ಣತೆಯನ್ನು ಹಾಗೂ ಅನುಭವಗಳನ್ನು ‘ಕೃತಿಯಲ್ಲಿ ಸಾದರಪಡಿಸಿದ್ದಾರೆ’ ಎಂದುಸಾಮಾಜಿಕ ಕಾರ್ಯಕರ್ತ ಸುಧೀರ್ ಕುಮಾರ್ ಮೂರೊಳ್ಳಿ ಹೇಳಿದರು.
ಕನ್ನಡ ಸಾಹಿತ್ಯ ವಿಮರ್ಶೆ ಕೊಂದು ಬಹಳ ದಿನಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಕೇವಲ ಪರಿಚಯ ಹಾಗೂ ಪರಸ್ಪರ ಹೊಗಳಿಕೆ ತರಹದ ವಿಮರ್ಶೆ ಜಾಸ್ತಿಯಾಗಿದೆ. ಇದು ದುರಂತ ಎಂದುಪ್ರಾಧ್ಯಾಪಕ ಮತ್ತು ಲೇಖಕರಾದ ಪ್ರೊ.ಬಿ.ಎಲ್.ರಾಜು ಹೇಳಿದರು.
ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ,ಲೇಖಕ ಡಾ.ಪುರುಷೋತ್ತಮ ಬಿಳಿಮಲೆ, ಕವಯತ್ರಿ ಡಿ.ಬಿ.ರಜಿಯ ಇದ್ದರು.