ಶಿವಮೊಗ್ಗ: ಹಿಂದೂ ಸಂಘಟನೆಗಳ ಕಾರ್ಯಕರ್ತರ ಕೊಲೆ ಪ್ರಕರಣ ಬೇಧಿಸುವಲ್ಲಿ ಸರ್ಕಾರ ಸಮರ್ಪಕವಾಗಿ ಕೆಲಸ ಮಾಡುತ್ತಿದೆ ಎಂದು ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ಸರ್ಕಾರ ಸಮರ್ಪಕವಾಗಿ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ ಹಾಗೂ ಗೃಹಮಂತ್ರಿ ಸಮರ್ಪಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಈಶ್ವರಪ್ಪ ಮನೆಗೆ ಭೇಟಿ: ಬೆಳಿಗ್ಗೆ ಶಾಸಕ ಕೆ.ಎಸ್.ಈಶ್ವರಪ್ಪ ಅವರ ನಿವಾಸಕ್ಕೆ ಸ್ವಾಮೀಜಿಭೇಟಿ ನೀಡಿದ್ದರು. ಈ ವೇಳೆ ಈಶ್ವರಪ್ಪ ಅವರು ಕುಟುಂಬ ಸಮೇತರಾಗಿ ಸ್ವಾಮೀಜಿ ಅವರನ್ನು ಗೌರವಿಸಿದರು.
‘ಮಂಗಳಗೌರಿ ವ್ರತ, ಶ್ರಾವಣ ಮಾಸದ ಕಾರಣ ಈಶ್ವರಪ್ಪ ಅವರ ಮನೆಗೆ ಭೇಟಿ ನೀಡಿದ್ದೇನೆ. ಈ ಮನೆಯಲ್ಲೂ ಮಠದ ವಾತಾವರಣವೇ ಇದೆ. ನಮ್ಮ ಮಠದೊಂದಿಗೆ ಈಶ್ವರಪ್ಪ ಅವರ ಬಾಂಧವ್ಯ ಬಹಳ. ಹೀಗಾಗಿ ಶಿವಮೊಗ್ಗಕ್ಕೆ ಬಂದಾಗ ಅವರ ಮನೆಗೆ ಭೇಟಿ ನೀಡದಿದ್ದರೆ ಮನಸ್ಸಿಗೆ ಕಸಿವಿಸಿ’ ಎಂದರು.
ನಂತರ ಸ್ವಾಮೀಜಿ ಪುರಲೆಯಲ್ಲಿ ನಿರ್ಮಿಸಿರುವ ದುರ್ಗಾಂಬಾ ದೇವಸ್ಥಾನದ ಕಲಶ ಪ್ರತಿಷ್ಠಾಪನಾ ಕಾರ್ಯದಲ್ಲಿ ಪಾಲ್ಗೊಂಡರು.