ಸಾಗರ: ಇಲ್ಲಿನ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಸದಸ್ಯರ ಸಭೆಯಲ್ಲಿ ಪ್ರತಿಷ್ಠಾನದ ಪದಾಧಿಕಾರಿಗಳ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ಮೇಲೆ ಮೊಕದ್ದಮೆ ದಾಖಲಿಸದಿದ್ದರೆ ಡಿವೈಎಸ್ಪಿ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಬ್ರಾಹ್ಮಣ, ವೀರಶೈವ ಒಕ್ಕೂಟದ ಸಂಚಾಲಕ ಕೆ.ಎನ್. ಶ್ರೀಧರ್ ಎಚ್ಚರಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಂಡಿಎಫ್ನ ಸರ್ವ ಸದಸ್ಯರ ಸಭೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಶ್ರೀಪಾದ ಹೆಗಡೆ ನಿಸರಾಣಿ ಹಾಗೂ ಜಗದೀಶ್ ಗೌಡ ಅವರ ಮೇಲೆ ಶಾಸಕ ಹಾಲಪ್ಪ ಅವರ ಬೆಂಬಲಿಗರಿಂದ ಹಲ್ಲೆ ನಡೆದಿದೆ. ಇದನ್ನು ಬ್ರಾಹ್ಮಣ ಹಾಗೂ ಲಿಂಗಾಯತ ಸಮುದಾಯದವರು ಖಂಡಿಸಿದ್ದರೂ ಹಲ್ಲೆ ಮಾಡಿದವರ ಮೇಲೆ ಪ್ರಕರಣ ದಾಖ ಲಿಸಲು ಹಿಂದೇಟು ಹಾಕುತ್ತಿರುವುದು ಏಕೆ’ ಎಂದು ಪ್ರಶ್ನಿಸಿದರು.
ಹಲ್ಲೆ ನಡೆಸಿದವರ ಮೇಲೆ ಕ್ರಮ ತೆಗೆದುಕೊಳ್ಳದೇ ಇದ್ದರೆ ಎಂಡಿಎಫ್ ವಿವಾದದಲ್ಲಿ ಏನು ನಡೆದಿದೆ ಎನ್ನುವ ಬಗ್ಗೆ ಕರಪತ್ರ ಮುದ್ರಿಸಿ ಹಂಚುವ ಕೆಲಸ ಮಾಡಲಾಗುವುದು. ಅದರ ಜೊತೆಗೆ ಹಲ್ಲೆಯ ವಿಡಿಯೊವನ್ನೂ ಸಾರ್ವಜನಿಕರಿಗೆ ಮುಟ್ಟಿಸಲಾಗುವುದು ಎಂದರು.
ವೀರ ಶಿವಪ್ಪನಾಯಕ ಒಕ್ಕೂಟದ ಚಂದ್ರಶೇಖರ್ ಎನ್.ಎಚ್., ‘ಶಾಸಕ ಹಾಲಪ್ಪ ಅವರು ಖಾಸಗಿ ಗೂಂಡಾಪಡೆಯನ್ನು ಇಟ್ಟುಕೊಂಡಿದ್ದಾರೆ. ಎಂಡಿಎಫ್ ಸಭೆಯಲ್ಲಿ ನಡೆದಿರುವ ಹಲ್ಲೆ ಪ್ರಕರಣ ಪೂರ್ವನಿಯೋಜಿತ. ಆದರೂ ಅದೊಂದು ಆಕಸ್ಮಿಕ ಘಟನೆ ಎಂದು ಬಿಂಬಿಸಲು ಶಾಸಕರು ಪ್ರಯತ್ನಿಸುತ್ತಿದ್ದಾರೆ. ಇದನ್ನು ಬ್ರಾಹ್ಮಣ ಹಾಗೂ ಲಿಂಗಾಯತ ಸಮುದಾಯ ಸಹಿಸುವುದಿಲ್ಲ’ ಎಂದು ಹೇಳಿದರು.
ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ರವೀಶ್ ಕುಮಾರ್, ಪ್ರಮುಖರಾದ ಅನಿಲ್ಗೌಡ, ವಸಂತ ಕುಮಾರ್ ಜಿ.ವಿ., ಗಂಗಾಧರ್ ಎಸ್.ಸಿ., ಸುದರ್ಶನ್ ಕುಮಾರ್, ದಳವಾಯಿ ದಾನಪ್ಪ ಇದ್ದರು.