‘ಚರಕ’ದಿಂದ ಶ್ರಮ ಸಂಸ್ಕೃತಿಗೆ ಹೊಸ ವ್ಯಾಖ್ಯಾನ: ಹಾಲಪ್ಪ ಹರತಾಳು

ಸಾಗರ: ಶ್ರಮ ಸಂಸ್ಕೃತಿ ಬಗ್ಗೆ ಮಾತನಾಡುವುದು ಸುಲಭ. ಆದರೆ, ಅದನ್ನು ಜಾರಿಗೆ ತರುವುದು ಕಷ್ಟಸಾಧ್ಯ. ಚರಕ ಸಂಸ್ಥೆ ಅದನ್ನು ಜಾರಿಗೆ ತರುವ ಜೊತೆಗೆ ಶ್ರಮ ಸಂಸ್ಕೃತಿಗೆ ಹೊಸ ವ್ಯಾಖ್ಯಾನ ಬರೆದಿದೆ ಎಂದು ಎಚ್.ಹಾಲಪ್ಪ ಹರತಾಳು ಹೇಳಿದರು.
ತಾಲ್ಲೂಕಿನ ಹೊನ್ನೇಸರ ಗ್ರಾಮದ ಶ್ರಮಜೀವಿ ಆಶ್ರಮದಲ್ಲಿ ಚರಕ ಸಂಸ್ಥೆ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ ಹೊಲಿಗೆ ವಿಭಾಗದವರಿಗೆ ಹೊಲಿಗೆ ಯಂತ್ರವನ್ನು ವಿತರಿಸಿ ಅವರು ಮಾತನಾಡಿದರು.
ಸೃಜನಶೀಲತೆಗೆ ಮತ್ತೊಂದು ಹೆಸರು ಚರಕ ಸಂಸ್ಥೆ ಎನ್ನುವ ರೀತಿಯಲ್ಲಿ ಅದರ ಆರಂಭದಿಂದಲೂ ಕಾರ್ಯ ನಿರ್ವಹಿಸುತ್ತಿದೆ. ಆಯಾ ಕಾಲಘಟ್ಟಕ್ಕೆ ಬೇಕಾದ ಬದಲಾವಣೆಗಳನ್ನು ರೂಢಿಸಿಕೊಂಡಾಗ ಮಾತ್ರ ಬೆಳವಣಿಗೆ ಸಾಧ್ಯ ಎಂಬ ಎಚ್ಚರ ಚರಕ ಸಂಸ್ಥೆಗೆ ಇರುವುದರಿಂದ ಕೈಮಗ್ಗ ಕ್ಷೇತ್ರದಲ್ಲಿ ಯಶಸ್ಸು ಕಾಣಲು ಸಾಧ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಧಾರವಾಡ ಕ್ಷೇತ್ರದ ಮಾಜಿ ಶಾಸಕ ಚಂದ್ರಕಾಂತ್ ಬೆಲ್ಲದ್, ‘ಕಾಯಕ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದ ಶ್ರೇಯಸ್ಸು ಚರಕ ಸಂಸ್ಥೆಗೆ ಸಲ್ಲುತ್ತದೆ. ಒಂದು ಗ್ರಾಮೀಣ ಉದ್ಯಮವನ್ನು ಯಾವ ರೀತಿ ಕಟ್ಟಿ ಮುನ್ನಡೆಸಬೇಕು ಎಂಬುದಕ್ಕೆ ಚರಕ ಒಂದು ಮಾದರಿಯಾಗಿದೆ’ ಎಂದರು.
ಚರಕ ಸಂಸ್ಥೆಯ ಪ್ರಸನ್ನ, ‘ನಮ್ಮ ಸಂಸ್ಥೆಯ ಮಹತ್ವಾಕಾಂಕ್ಷೆಯ ಯೋಜನೆ ಯಾದ ‘ಪವಿತ್ರ ವಸ್ತ್ರ’ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ಕರ್ನಾಟಕದಲ್ಲಿರುವ ಎಲ್ಲಾ ಮಠಗಳಿಗೆ ಈ ಯೋಜನೆಯಡಿ ಕಷಾಯ ವಸ್ತ್ರಗಳನ್ನು ಪೂರೈಸಲಾಗು ವುದು. ಇದರಿಂದಾಗಿ ಕರ್ನಾಟಕದ ಬಹುತೇಕ ನೇಕಾರರಿಗೆ ವರ್ಷಪೂರ್ತಿ ಉದ್ಯೋಗ ದೊರಕಲಿದೆ’ ಎಂದರು.
ಹೆಗ್ಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಾ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ನಿವೃತ್ತ ಅಧಿಕಾರಿ ರಾಮಚಂದ್ರಪ್ಪ, ಚರಕ ಸಂಸ್ಥೆಯ ಅಧ್ಯಕ್ಷೆ ಗೌರಮ್ಮ, ವಿನ್ಯಾಸಕಾರ ಶೇಖರ್ ಇದ್ದರು. ಪದ್ಮಶ್ರೀ ಕಾರ್ಯಕ್ರಮವನ್ನು ನಿರ್ವಹಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.