ರಿಪ್ಪನ್ಪೇಟೆ: ಹವಾಮಾನ ವೈಪರೀತ್ಯದಿಂದಾಗಿ ಮಾರುಕಟ್ಟೆಯಲ್ಲಿ ಬೆಳೆಗಳಿಗೆ ಸ್ಥಿರ ಧಾರಣೆ ಸಿಗದಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ರೈತರು ಧೃತಿಗೆಡದೆ ತಮ್ಮ ಜಮೀನಿನಲ್ಲಿ ಉಪಬೆಳೆಗಳ ಮೂಲಕ ಆರ್ಥಿಕ ಸ್ವಾವಲಂಬನೆ ಹೊಂದಬಹುದು ಎಂದು ಸಾಗರ ತಾಲ್ಲೂಕು ಅಗರ್ವುಡ್ ಪ್ರವರ್ತಕ ಜಿ. ಚಂದ್ರು ಅಭಿಪ್ರಾಯಪಟ್ಟರು.
ಪಟ್ಟಣಕ್ಕೆ ಸಮೀಪದ ಸುಳಕೋಡು ಗ್ರಾಮದ ಪ್ರಗತಿಪರ ರೈತ ಶೃಂಗೇರಿ ಜಯಪ್ರಕಾಶ್ ಅವರ ಜಮೀನಿನಲ್ಲಿ ಗುರುವಾರ ವನದುರ್ಗಾ ಸಂಸ್ಥೆ ಆಯೋಜಿಸಿದ್ದ ಅಗರ್ವುಡ್ ಮರಗಳ ಕಟಾವು ಮತ್ತು ಸಂಸ್ಕರಣೆ ಕಾರ್ಯಕ್ರಮದಲ್ಲಿ ಸಂಸ್ಥೆಯಿಂದ ಜಯಪ್ರಕಾಶ್ ಅವರಿಗೆ ಮುಂಗಡ ಚೆಕ್ ವಿತರಿಸಿ ಮಾತನಾಡಿದರು.
ಅಡಿಕೆ, ರಬ್ಬರ್, ಕಾಳುಮೆಣಸು ಮತ್ತು ಶುಂಠಿ ಹೀಗೆ ಹತ್ತು ಹಲವು ಬೆಳೆಗಳ ನಡುವೆಯೇ ಈ ಬೆಳೆ ಹಾಕಬಹುದು. ಕೃಷಿಯಲ್ಲಿಯೇ ಅತ್ಯಂತ ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭಗಳಿಕೆಯ ಕೃಷಿ ಇದಾಗಿದೆ. ಇದಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹಳ ಬೇಡಿಕೆ ಇದೆ ಎಂದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಧರ್ಮೇಂದ್ರ ಕುಮಾರ್ ಹೆಗಡೆ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಈ ಬೆಳೆಗೆ ಯಾವುದೇ ಸೌಲಭ್ಯಗಳಿಲ್ಲ. ರೈತರ ಜಮೀನಿನ ಆರ್.ಟಿ.ಸಿ.ಯಲ್ಲಿ ಈ ಬೆಳೆ ನಮೂದಾಗಿದ್ದರೆ ವನದುರ್ಗಾ ಸಂಸ್ಥೆಯೇ ನೇರವಾಗಿ ರೈತರ ಮನೆಗಳಿಗೆ ಭೇಟಿ ನೀಡಿ ಅದರ ಫಸಲು ಕೈಗೆಟುಕುವವರೆಗೂ ಸೂಕ್ತ ಮಾರ್ಗದರ್ಶನ ನೀಡಿ, ಔಷಧೋಪಚಾರ ನಡೆಸಿ ಖರೀದಿಸಲಿದೆ. ಅಲ್ಲದೇ ಸ್ಥಳೀಯ ಯುವಕರಿಗೂ ಮಳೆಗಾಲದ ಮೂರು ತಿಂಗಳು ಹೊರತುಪಡಿಸಿ ಈ ಕುರಿತು ತರಬೇತಿ ನೀಡಲಾಗುವುದು’ ಎಂದರು.
ಬಸರಿಕಟ್ಟೆಯ ಸುಹಾಸ್ತೀ, ರ್ಥಹಳ್ಳಿ ತಾಲ್ಲೂಕಿನ ಪ್ರವರ್ತಕ ಕಾರ್ಕೊಡ್ಲು ಮಂಜುನಾಥ ಭಟ್, ಹನಸ ದೇವೇಂದ್ರ, ಕನ್ನಂಗಿ ಶೇಷಾದ್ರಿ, ಸಾಗರದ ಮಹಾಬಲೇಶ್, ಶಿವಮೊಗ್ಗದ ಜೆ. ಸುರೇಂದ್ರ, ಚಿತ್ರದುರ್ಗದ ಹನುಮಂತಪ್ಪ ಇದ್ದರು. ರಾಮಪ್ಪ ಸ್ವಾಗತಿಸಿದರು. ಸುಹಾಸ್ ವಂದಿಸಿದರು.