ಸಾಗರ: ‘ಧರ್ಮದ ಶಕ್ತಿಯನ್ನು ಯಾರಿಂದಲೂ ನಾಶಗೊಳಿಸಲು ಸಾಧ್ಯವಿಲ್ಲ. ಧರ್ಮವನ್ನು ಯಾರಾದರೂ ನಾಶ ಮಾಡಲು ಮುಂದಾದರೆ ಅವರೇ ನಾಶವಾಗುತ್ತಾರೆ’ ಎಂದು ರಂಭಾಪುರಿ ಮಠದ ಪ್ರಸನ್ನ ರೇಣುಕಾ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.
ಇಲ್ಲಿನ ಗಾಂಧಿ ಮೈದಾನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ತಾಲ್ಲೂಕು ಘಟಕ ಶುಕ್ರವಾರ ಏರ್ಪಡಿಸಿದ್ದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ‘ವಿಶ್ವ ಬಂಧುತ್ವದ ಆದರ್ಶ ಮೌಲ್ಯ ಹೊಂದಿರುವುದು ವೀರಶೈವ ಲಿಂಗಾಯಿತ ಸಮಾಜದ ವಿಶೇಷವಾಗಿದೆ’ ಎಂದರು.
‘ವೀರಶೈವ ಎಂದರೆ ಕೇವಲ ಒಂದು ಜಾತಿಗೆ ಸೀಮಿತವಾಗಿಲ್ಲ. ಅದಕ್ಕೆ ಧರ್ಮ, ಸಮುದಾಯದ ವಿಶಾಲವಾದ ತಳಹದಿ ಇದೆ.ಮಠ ಮಾನ್ಯಗಳ ದಾಸೋಹ ಪರಂಪರೆಯಿಂದ ವೀರಶೈವ ಸಮಾಜದ ಘನತೆ ಹೆಚ್ಚಿದೆ’ ಎಂದುಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
‘ನೋವು ಮಾನವ ಕುಲದ ಮಹಾಗುರು ಎಂಬ ಸಂದೇಶವನ್ನು ರಂಭಾಪುರಿ ಪೀಠ ಸತತವಾಗಿ ಸಾರುತ್ತಿದೆ. ಧರ್ಮದ ಜೊತೆ ಕೃಷಿ, ಸಂಸ್ಕೃತಿ, ಸಮುದಾಯದ ಏಳಿಗೆಗಾಗಿ ಈ ಮಠವು ನಿರಂತರಾವಾಗಿ ಶ್ರಮಿಸುತ್ತಿದೆ’ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ಹೇಳಿದರು.
ಮಳಲಿ ಮಠದ ಡಾ.ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಸಂಗಮೇಶ್ವರ, ಮೂಲೆಗದ್ದೆ ಸದಾಶಿವ ಶಿವಯೋಗ ಆಶ್ರಮದ ಅಭಿನವ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಶೇಖರಪ್ಪ ಗೌಡ್ರು ಅಧ್ಯಕ್ಷತೆ ವಹಿಸಿದ್ದರು.