ಶಿವಮೊಗ್ಗ: ಇಲ್ಲಿನ ಕಂಟ್ರಿಕ್ಲಬ್ ಆವರಣದಲ್ಲಿ ಮೇ 1ರಂದು ನೂತನ ಕ್ರೀಡಾ ಸಂಕೀರ್ಣದ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಿವಮೊಗ್ಗ ಕಂಟ್ರಿ ಕ್ಲಬ್ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
ಅತ್ಯಾಧುನಿಕ ವ್ಯವಸ್ಥೆಯೊಂದಿಗೆ ₹5 ಕೋಟಿ ವೆಚ್ಚದಲ್ಲಿ ಶಿವಮೊಗ್ಗ ಕಂಟ್ರಿ ಕ್ಲಬ್ ಆವರಣದಲ್ಲಿ ದೊಡ್ಡ ಕ್ರೀಡಾ ಸಂಕೀರ್ಣ ನಿರ್ಮಾಣ ಪೂರ್ಣಗೊಂಡಿದೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕ್ರೀಡಾ ಸಂಕೀರ್ಣ ಉದ್ಘಾಟಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
1991ರಲ್ಲಿ ಸಮಾನ ಮನಸ್ಕರು ಸೇರಿ ತುಂಗಾ ನದಿ ತೀರದಲ್ಲಿ ಮೂರುವರೆ ಎಕರೆ ಪ್ರದೇಶದಲ್ಲಿ ಆರಂಭವಾದ ಶಿವಮೊಗ್ಗ ಕಂಟ್ರಿ ಕ್ಲಬ್, ಪ್ರಭಾವಿ ಸಂಸ್ಥೆಯಾಗಿ ಸದೃಢವಾಗಿ ರೂಪುಗೊಳ್ಳುತ್ತ ಸಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಶಿವಮೊಗ್ಗ ಕಂಟ್ರಿ ಕ್ಲಬ್ನಲ್ಲಿ 1200 ಸದಸ್ಯರು ಇದ್ದು, ಎಲ್ಲ ಸದಸ್ಯರ ಸಹಕಾರದಿಂದ ಸಕಲ ರೀತಿಯಲ್ಲಿ ಅನುಕೂಲ ಹಾಗೂ ಸೌಲಭ್ಯ ಒದಗಿಸಲಾಗುತ್ತಿದೆ. 1200 ಸಕ್ರಿಯ ಸದಸ್ಯರಿಗೆ ಕ್ರೀಡಾ ಚಟುವಟಿಕೆಗೆ ಪೂರಕವಾಗಿ ಅನುಕೂಲವಾಗುವಂತೆ ಕ್ರೀಡಾ ಸಂಕೀರ್ಣ ರೂಪಿಸಲಾಗಿದೆ. ರೆಸ್ಟೋರೆಂಟ್ ವ್ಯವಸ್ಥೆ ಇದೆ. ಎಲ್ಲ ಸದಸ್ಯರ ಕನಸು ಹಾಗೂ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಲು ಶಿವಮೊಗ್ಗ ಕಂಟ್ರಿ ಕ್ಲಬ್ ವೇದಿಕೆಯಾಗಿ ಕೆಲಸ ಮಾಡಿದೆ ಎಂದು ಹೇಳಿದರು.
ಶಿವಮೊಗ್ಗ ಕಂಟ್ರಿ ಕ್ಲಬ್ನಲ್ಲಿ ಸದಸ್ಯರ ಅನುಕೂಲಕ್ಕಾಗಿ ಎಲ್ಲಾ ಸೌಲಭ್ಯ ಒಳಗೊಂಡಿರುವ ನೂತನ ಕ್ರೀಡಾ ಸಂಕೀರ್ಣದಲ್ಲಿ ಒಳಾಂಗಣ ಶೆಟಲ್ ಕೋರ್ಟ್, ಬ್ಯಾಂಕೆಟ್ವ್ ಹಾಲ್, ಹೋಂ ಥಿಯೇಟರ್, ಸ್ಕಾರ್ಷ್, ಬಿಲ್ಲಿಯರ್ಡ್, ಬೌಲಿಂಗ್, ಮೋಶನ್ ಕ್ರಿಕೆಟ್, ಕೇರಂ, ಚೆಸ್, ಅಧ್ಯಯನ ಕೊಠಡಿ, ಜಿಮ್ ಸೇರಿ ಉತ್ತಮ ಹಾಗೂ ಆತ್ಯಾಧುನಿಕ ಸೌಕರ್ಯದ ವ್ಯವಸ್ಥೆ ರೂಪಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ರೋಜರ್ ಬಿನ್ನಿ, ಉಪಾಧ್ಯಕ್ಷ ಜೆ.ರಘುರಾಮ್, ಸೂಡಾ ಅಧ್ಯಕ್ಷ ನಾಗರಾಜ್, ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಪಾಲ್ಗೊಳ್ಳುವರು.ಎಲ್ಲ ಸದಸ್ಯರ ಸಹಕಾರ, ಮಾರ್ಗದರ್ಶನ, ಪ್ರೋತ್ಸಾಹದಿಂದ ಕ್ರೀಡಾ ಸಂಕೀರ್ಣದ ನಿರ್ಮಾಣ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಕಾರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುವ ಆಶಯವಿದೆ ಎಂದರು.
ಶಿವಮೊಗ್ಗ ಕಂಟ್ರಿ ಕ್ಲಬ್ ಕ್ರೀಡಾ ಸಂಕೀರ್ಣದ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಭೂಪಾಳಂ ಶಶಿಧರ್, ಕಾರ್ಯದರ್ಶಿ ಜಿ.ಎನ್.ಪ್ರಕಾಶ್, ಉಪಾಧ್ಯಕ್ಷ ಎಚ್.ಜಿ. ಅಶೋಕ್, ಜಂಟಿ ಕಾರ್ಯದರ್ಶಿ ಹೊಸತೋಟ ಕೆ. ಮಂಜುನಾಥ್, ಖಜಾಂಚಿ ಮದನ್ಲಾಲ್, ನಿರ್ದೇಶಕರಾದ ಕಡಿದಾಳ್ ಸದಾನಂದ್, ಬಿ.ಆರ್. ಅಮರ್ನಾಥ್, ಎಸ್.ಕೆ. ಕುಮಾರ್, ಎ. ಮಂಜುನಾಥ್, ಡಾ.ಎ. ಸತೀಶ್ಕುಮಾರ್ ಶೆಟ್ಟಿ, ವಿ. ಸತೀಶ್ಚಂದ್ರ, ಡಾ.ವೈ.ವಿ. ಶಶಿಧರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.