ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರ ಕ್ಷೇತ್ರದಲ್ಲಿ ವಿಪುಲ ಅವಕಾಶ: ಅಶೋಕ್ ಹಾರನಹಳ್ಳಿ ಅಭಿಪ್ರಾಯ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಅಭಿಪ್ರಾಯ
Last Updated 2 ನವೆಂಬರ್ 2021, 6:54 IST
ಅಕ್ಷರ ಗಾತ್ರ

ಶಿವಮೊಗ್ಗ: ಸಹಕಾರ ತತ್ವ ಅಮೂಲ್ಯವಾಗಿದೆ. ಉತ್ತಮ ವ್ಯಕ್ತಿಗಳಿಂದ ಸಹಕಾರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತವೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ, ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಹೇಳಿದರು.

ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಸೋಮವಾರ ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾ ಹಮ್ಮಿಕೊಂಡಿದ್ದ ಶಿವಮೊಗ್ಗ ಜಿಲ್ಲಾ ವಿಪ್ರ ಸಹಕಾರ ನಿರ್ದೇಶಕರ ಹಾಗೂ ಪ್ರಮುಖರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ವಿಪ್ರ ಸಹಕಾರಿಗಳ ಸಮಾವೇಶ ಬೇಕಿತ್ತಾ ಎನ್ನುವ ಪ್ರಶ್ನೆ ಕೆಲವರಲ್ಲಿ ಕಾಡುತ್ತಿದೆ. ಹೈಕೋರ್ಟ್ ನ್ಯಾಯಮೂರ್ತಿ ಕೂಡ ಹಲವು ಬಾರಿ ಜಾತಿಗಳಿಗೆ ನಿಗಮ ಮತ್ತು ಅಭಿವೃದ್ಧಿ ಮಂಡಳಿಗಳು ಬೇಕಾ ಎಂದು ಪ್ರಶ್ನಿಸಿದ್ದಾರೆ. ಆದರೆ, ಸಂವಿಧಾನ ರಚನೆಯಾಗಿ ಹಲವು ವರ್ಷಗಳಾದರೂ ಸಂವಿಧಾನದ ಅಡಿಯಲ್ಲೇ ಜಾತಿ ಆಧಾರದ ಮೇಲೆ ಮೀಸಲಾತಿಯನ್ನು ಇಂದಿಗೂ ನೀಡಲಾಗುತ್ತಿದೆ. ಹೀಗಿದ್ದಾಗ ಎಲ್ಲಾ ಜಾತಿಗಳಿಗೂ ಸಮಾವೇಶ ಮತ್ತು ನಿಗಮಗಳ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಪ್ರಜಾಪ್ರಭುತ್ವದಲ್ಲಿ ಸಂಖ್ಯೆಯೇ ಪ್ರಮುಖವಾಗಿದೆ. ಆದ್ದರಿಂದ ಜಾತಿ ಆಧಾರಿತ ಕಾರ್ಯಕ್ರಮಗಳು ಅನಿವಾರ್ಯವಾಗಿವೆ. ಸಹಕಾರಿ ಕ್ಷೇತ್ರದಲ್ಲಿ ವಿಪ್ರ ಸಹಕಾರಿಗಳಿಗೆ ವಿಪುಲವಾದ ಅವಕಾಶವಿದೆ. ಅಮುಲ್, ಲಿಜ್ಜತ್ ಪಾಪಡ್ ಸೇರಿ ಅನೇಕ ಫರ್ಟಿಲೈಸರ್ಸ್ ಕೋ ಆಪರೇಟಿವ್ ಸಂಸ್ಥೆಗಳು ದೇಶದಲ್ಲಿ ಅತ್ಯುನ್ನತ ಸ್ಥಾನ ಪಡೆದಿವೆ ಎಂದರು.

ಅನೇಕ ಕೋ ಆಪರೇಟಿವ್ ಬ್ಯಾಂಕ್‌ಗಳಲ್ಲಿ ರಾಜಕೀಯ ಪ್ರವೇಶವಾಗಿದೆ ಎಂಬ ಆರೋಪವಿದೆ. ನಿರ್ದೇಶಕರ ಹುದ್ದೆಗಳಿಗೆ ಪೈಪೋಟಿ ಇದೆ. ಸ್ವಯಂಕೃತ ಅಪರಾಧದಿಂದ ಮಾತ್ರ ಕೆಲವು ಸಹಕಾರ ಸಂಸ್ಥೆಗಳು ನಷ್ಟ ಅನುಭವಿಸಿವೆ. ಆದರೆ, ಸಹಕಾರ ಕ್ಷೇತ್ರದಲ್ಲಿ ಪರಸ್ಪರ ಸಹಕಾರದಿಂದ ಏನು ಬೇಕಾದರೂ ಸಾಧನೆ ಮಾಡಬಹುದು ಎಂದು ಅನೇಕ ಸಂಸ್ಥೆಗಳು ತೋರಿಸಿವೆ. ಸಾರ್ವಜನಿಕರ ನಂಬಿಕೆಯನ್ನು ಸಹಕಾರ ಸಂಸ್ಥೆಗಳು ಕಳೆದುಕೊಳ್ಳಬಾರದು ಎಂದು ಸಲಹೆ
ನೀಡಿದರು.

ದುರಂತವೆಂದರೆ ಸಹಕಾರಿ ಕ್ಷೇತ್ರದಲ್ಲಿಷ್ಟು ವ್ಯಾಜ್ಯಗಳು ಬೇರೆ ಯಾವ ಕ್ಷೇತ್ರದಲ್ಲೂ ಇಲ್ಲ. ರಾಜಕೀಯ ಪ್ರವೇಶ ಸಹಕಾರ ಕ್ಷೇತ್ರವನ್ನು ನಿಯಂತ್ರಣ ಮಾಡುವ ಉದ್ದೇಶ ಅಡಗಿದೆ ಎಂಬುದು ಸತ್ಯ. ಆದರೆ, ಕೆಲವೊಂದು ಬದಲಾವಣೆ ಸಹಕಾರ ಕ್ಷೇತ್ರದಲ್ಲೂ ಅಗತ್ಯವಿದೆ. ಸಾರ್ವಜನಿಕರಿಗೆ ಬಹೂಪಯೋಗವಾಗುವ ಸಹಕಾರ
ಕ್ಷೇತ್ರವನ್ನು ಬೆಳೆಸುವುದು, ಅಭಿವೃದ್ಧಿಪಡಿಸುವುದು ಎಲ್ಲರ ಕರ್ತವ್ಯ ಎಂದರು.

ಮುಖ್ಯಅತಿಥಿಗಳಾಗಿ ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ರಮೇಶ್ ವೈದ್ಯ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭ್, ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನಟರಾಜ ಭಾಗವತ್, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮದ ನಿಗಮದ ನಿರ್ದೇಶಕರಾದ ಎ.ಆರ್. ಪ್ರಸನ್ನಕುಮಾರ್ ಸೇರಿ ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಪದಾಧಿಕಾರಿಗಳು, ವಿಪ್ರ ಸಮಾಜದ ಪ್ರಮುಖರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT