ಸಾಗರ: ಮೇ 18ರಿಂದ 22ರವರೆಗೆ ಪ್ರಥಮ ಬಾರಿಗೆ ಸಾಗರ ನಗರದಲ್ಲಿ ಪಂಚ ಕಲ್ಯಾಣ ಮಹೋತ್ಸವ ನಡೆಯಲಿದೆ ಎಂದು ಹೊಂಬುಜ ಜೈನ ಮಠದ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದ್ದಾರೆ.
ಗುರುವಾರ ನಡೆದ ದಿಗಂಬರ ಜೈನ ಬಸದಿಯ ಮಾನಸ್ತಂಭ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಗರದ ನೆಹರೂ ಮೈದಾನದಲ್ಲಿ ಭಗವಾನ್ ಶ್ರೀ ಆದಿನಾಥ ತೀರ್ಥಂಕರರ ನೂತನ ಬಸದಿ ನಿರ್ಮಾಣಗೊಳ್ಳುತ್ತಿದೆ. ಬಸದಿಯ ಎದುರು 30 ಅಡಿ ಎತ್ತರದ ಮಾನಸ್ತಂಭ ನಿರ್ಮಿಸಲಾಗಿದೆ.ಜೈನ ಧರ್ಮ ಶಾಂತಿ ಮತ್ತು ಅಹಿಂಸೆಯ ಸಂದೇಶವನ್ನು ಸಾರುವ ಮೂಲಕ ಜಗತ್ತಿನ ಎಲ್ಲೆಡೆ ಮಾನ್ಯತೆ ಗಳಿಸಿದೆ. ಜೈನ ಬಸದಿಯ ಎದುರಿನ ಮಾನಸ್ತಂಭ ದರ್ಶನ ಮಾಡಿದಲ್ಲಿ ಅಜ್ಞಾನ ದೂರವಾಗಿ ಭಗವಂತನ ಕೃಪೆಗೆ ಪಾತ್ರರಾಗುತ್ತಾರೆ ಎಂಬ ಪ್ರತೀತಿ ಇದೆ ಎಂದು ಹೇಳಿದರು.
ಪಂಚ ಕಲ್ಯಾಣ ಮಹೋತ್ಸವದ ಯಶಸ್ಸಿಗೆ ಪಂಚ ಕಲ್ಯಾಣ ಸಮಿತಿ ವಿಶೇಷ ಯೋಜನೆ ರೂಪಿಸಿದೆ. ಪಂಚ ಕಲ್ಯಾಣ ಪ್ರತಿಷ್ಠಾಪನಾ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಸಿದ್ಧತೆಗಳು ಸಾಗಿವೆ. ಮಾನಸ್ತಂಭವನ್ನು ನವೀನ್ ಜೈನ್ ಮತ್ತು ಕುಟುಂಬದವರು ನಿರ್ಮಿಸಿಕೊಟ್ಟಿದ್ದಾರೆ ಎಂದರು.
ಜೈನ ಸಮಾಜದ ಪ್ರಮುಖರಾದ ರಾಜಕುಮಾರ ಜೈನ್, ಹೊಯ್ಸಳ ಜೈನ್, ಪದ್ಮರಾಜ ಜೈನ್, ನಾಗರಾಜ್, ನವೀನ್, ವಿ.ಟಿ.ಸ್ವಾಮಿ, ಚಂದ್ರಕಲಾ ಜೈನ್, ಜ್ಯೋತಿ ಸ್ವಾಮಿ, ಯಶೋಧರ ಇಂದ್ರ, ಡಾ.ಮಹವೀರ ಜೈನ್, ಬ್ರಹ್ಮಪಾಲ ಜೈನ್, ಭರತ್ ರಾಜ್ ಜೈನ್ ಇದ್ದರು.