ಹೊಳೆಹೊನ್ನೂರು: ಹೊಳೆಹೊನ್ನೂರು ಪಟ್ಟಣ ಪಂಚಾಯಿತಿಯಾಗಿ ಘೋಷಣೆಯಾಗಿದ್ದು, ಜನರಲ್ಲಿ ಪರ–ವಿರೋಧದ ಮಾತುಗಳು ಕೇಳಿಬರುತ್ತಿವೆ.
ಪಟ್ಟಣ ಪಂಚಾಯಿತಿ ಎಂಬುದು ಹೆಸರಿಗಷ್ಟೇ. ಇದರಿಂದಾಗಿ ಗ್ರಾಮಗಳಿಗೆ ಯಾವುದೇ ಪ್ರಯೋಜನವಿಲ್ಲ. ಗ್ರಾಮಗಳು ಹೆಚ್ಚಿನ ಆದ್ಯತೆ ಹಾಗೂ ಸೌಲಭ್ಯಗಳನ್ನು ಪಡೆಯಲು ಪಟ್ಟಣದ ಜೊತೆ ಸ್ಪರ್ಧೆ ಮಾಡಬೇಕಾಗುತ್ತದೆ. ಹೆಚ್ಚಿನ ತೆರಿಗೆ ವಿಧಿಸಲಾಗುತ್ತದೆ. ಅಭಿವೃದ್ಧಿ ಮರೀಚಿಕೆಯಾಗಲಿದೆ ಎನ್ನುವ ಮನೋಭಾವ ಕೆಲವರದ್ದು.
ಪಟ್ಟಣದ ಸುತ್ತಲಿನ ಗ್ರಾಮಗಳಾದ ಡಣಾಯಕಪುರ, ಸಿದ್ಲೀಪುರ, ಜಂಬರಘಟ್ಟೆ, ಮೂಡಲವಿಠಲಾಪುರ, ಕೆರೆಬೀರನ
ಹಳ್ಳಿ, ಎಮ್ಮೆಹಟ್ಟಿ ಹಾಗೂ ಬೈರನಹಳ್ಳಿ ಗ್ರಾಮಸ್ಥರು ಪಟ್ಟಣ ಪಂಚಾಯಿತಿಯಿಂದ ಬೇರ್ಪಡಿಸುವಂತೆ ಒತ್ತಾಯಿಸುತ್ತಿದ್ದಾರೆ.
ಇನ್ನು ಮುಂದೆ ಗ್ರಾಮ ಪಂಚಾಯಿತಿ ಸೌಲಭ್ಯಗಳು ದೊರೆಯುವುದಿಲ್ಲ. ನರೇಗಾದಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋಟ್ಯಂತರ ಅನುದಾನ ಲಭ್ಯವಾಗಿ ಗ್ರಾಮದ ಅಭಿವೃದ್ಧಿಗೆ ಸಹಕಾರವಾಗುತ್ತಿತ್ತು. ಪಟ್ಟಣ ಪಂಚಾಯಿತಿಯಾದರೆ ಅಭಿವೃದ್ಧಿ ಮರೀಚಿಕೆ ಎಂಬುದು
ಕೆಲವರ ವಾದ.
‘ಪಟ್ಟಣ ಪಂಚಾ ಯಿತಿಯಾಗಿ ಮೇಲ್ದರ್ಜೆಗೆ ಏರಿಸುವುದು ರಾಜ್ಯದಲ್ಲಿ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರ್ಕಾರ ಹುನ್ನಾರವಾಗಿದೆ. ಇದಕ್ಕೆ ನಮ್ಮ ಸಹಮತವಿಲ್ಲ. ಮುಂದಿನ ದಿನಗಳಲ್ಲಿ ಇದು ಗ್ರಾಮಗಳಿಗೆ ಮಾರಕವೇ ಹೊರತು ಯಾವುದೇ ಪ್ರಯೋಜನವಿಲ್ಲ’ ಎನ್ನುತ್ತಾರೆ ಗ್ರಾಮಸ್ಥ ನಾಗರಾಜ.
ನರೇಗಾ ಯೋಜನೆಯಲ್ಲಿ ಗ್ರಾಮಗಳಲ್ಲಿ ಸುಮಾರು 3000ಕ್ಕೂ ಅಧಿಕ ಜನರು 100 ದಿನ ಕೂಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಟ್ಟಣ
ಪಂಚಾಯಿತಿ ಆದರೆ ಅವರೆಲ್ಲರೂ ನಿರುದ್ಯೋಗ ಸಮಸ್ಯೆಯನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಹೀಗಾಗಿ ಪಟ್ಟಣ ಪಂಚಾಯಿತಿ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಒಲವು ಕಾಣುತ್ತಿಲ್ಲ. ಅಲ್ಲದೇ ಅಧಿಕಾರದ ಲಾಭಕ್ಕಾಗಿ ಬಿಜೆಪಿ ನಡೆಸುತ್ತಿರುವ ಹುನ್ನಾರ ಎನ್ನುತ್ತಾರೆ ಕಾಂಗ್ರೆಸ್ ಮುಖಂಡ ಕಗ್ಗಿ ಮಲ್ಲೇಶ್ರಾವ್ ಎಮ್ಮೆಹಟ್ಟಿ.
ಗ್ರಾಮ ಪಂಚಾಯಿತಿಯಲ್ಲಿ ಆಯ್ಕೆಯಾದ ಸದಸ್ಯರು ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸಿಕೊಂಡು ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಅಲ್ಲದೇ ಗ್ರಾಮದ ಹಿತದೃಷ್ಟಿಯಿಂದ ಗ್ರಾಮಾಡಳಿತ ಉತ್ತಮ ಎಂಬುದು ಹಲವರ ಅಭಿಪ್ರಾಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.