ಶಿವಮೊಗ್ಗ: ಆನ್ಲೈನ್ ಮೂಲಕ ಮದ್ಯ ಮಾರಾಟ ಮಾಡುವ ಪ್ರಸ್ತಾವ ಕೈಬಿಡುವಂತೆ ಆಗ್ರಹಿಸಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಡಿಸ್ಟ್ರಿಕ್ಟ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
‘ಹೊಸ ಎಂಎಸ್ಐಎಲ್ ಮಳಿಗೆಗಳನ್ನು ತೆರೆಯಬಾರದು. ಚಿಲ್ಲರೆ ಮದ್ಯ ಮಾರಾಟಗಾರರ ಲಾಭಾಂಶವನ್ನು ಹೆಚ್ಚಳ ಮಾಡಬೇಕು. 2011ರ ಜನಗಣತಿಯ ಅನ್ವಯ 5 ಸಾವಿರ ಅಥವಾ ಅದಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಸಿ.ಎಲ್. 6ಎ ಮತ್ತು ಸಿ.ಎಲ್ 7 ಸನ್ನದುಗಳನ್ನು ಆರಂಭಿಸಲು ಮಾಡಿರುವ ಆದೇಶವನ್ನು ರದ್ದುಗೊಳಿಸಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಕೋವಿಡ್ ಸಂದರ್ಭದಲ್ಲಿ ಲಾಕ್ಡೌನ್ನಿಂದ ಉಂಟಾಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು. ಅಬಕಾರಿ ಅಧಿಕಾರಿಗಳು ಸನ್ನದುದಾರರಿಗೆ ನೀಡುತ್ತಿರುವ ಕಿರುಕುಳ ತಪ್ಪಬೇಕು. ಹೆಚ್ಚುವರಿ ಅಬಕಾರಿ ಶುಲ್ಕವನ್ನು ಕೈಬಿಡಬೇಕು. ಸಿ.ಎಲ್ 2ರಲ್ಲಿ ಕೂಡ ಮದ್ಯ ಸೇವಿಸಲು ಅವಕಾಶ ಕಲ್ಪಿಸಬೇಕು. ಸಿ.ಎಲ್. 9ರಲ್ಲಿ ಮದ್ಯ ಪಾರ್ಸಲ್ ನೀಡಲು ಅವಕಾಶ ಕೊಡಬೇಕು. ಸಾಮಾನ್ಯ ಮೊಕದ್ದಮೆಗಳಿಗೆ ನೀಡುವ ದಂಡಗಳ ಮರು ಪರಿಶೀಲನೆ ಆಗಬೇಕು ಎಂದು ಒತ್ತಾಯಿಸಿದರು.
‘ಪೊಲೀಸ್ ಇಲಾಖೆಯ ಹಸ್ತಕ್ಷೇಪ ತಪ್ಪಬೇಕು. ಅನಗತ್ಯವಾಗಿ ಮದ್ಯದಂಗಡಿಗಳನ್ನು ಬಂದ್ ಮಾಡುವುದನ್ನು ನಿಲ್ಲಿಸಬೇಕು. ಸಿ.ಎಲ್.5ರ ನಿಯಮಗಳನ್ನು ಸರಳಗೊಳಿಸಬೇಕು. ಕಾಲ–ಕಾಲಕ್ಕೆ ಅಬಕಾರಿ ಅಧಿಕಾರಿಗಳಿಗೆ ಮದ್ಯ ಮಾರಾಟ ಸಂಘದ ಪದಾಧಿಕಾರಿಗಳಿಗೆ ಕಾನೂನು ತಜ್ಞರ ಜೊತೆ ಚರ್ಚಾಗೋಷ್ಠಿ ಏರ್ಪಡಿಸಬೇಕು’ ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಸಿ.ಎಂ. ಗೌಡ, ಟಿ.ವಿ. ಪ್ರಕಾಶ್, ರಾಜು, ಪಾಂಡುರಂಗ, ಕೃಷ್ಣಮೂರ್ತಿ, ಯೋಗೀಶ್, ಲಕ್ಷ್ಮಣಗೌಡ, ಗುಂಡಪ್ಪ ಗೌಡ, ರಂಗಸ್ವಾಮಿ, ಚೇತನ್ ಕುಮಾರ್, ಯುವರಾಜ್ ಇದ್ದರು.