ಹೊಳೆಹೊನ್ನೂರು: ‘ಸಾರಿಗೆ ಅಧಿಕಾರಿ ಗ್ರಾಮಕ್ಕೆ ಬಂದು ನೈಜ ಸಮಸ್ಯೆಯನ್ನು ನೋಡುವವರೆಗೆ ಬಸ್ಗಳನ್ನು ಮುಂದಕ್ಕೆ ಬಿಡುವುದಿಲ್ಲ’ ಎಂದು ಶಿವಮೊಗ್ಗದಿಂದ ಹೊಳಲೂರು ಮಾರ್ಗ ವಾಗಿ ಆನವೇರಿ ಭಾಗಕ್ಕೆ ಬರುವ ಸಾರಿಗೆ ಬಸ್ಗಳನ್ನು ಮಂಗೋಟೆ ಗ್ರಾಮಸ್ಥರು ತಡೆದು ಮಂಗಳವಾರ ಪ್ರತಿಭಟಿಸಿದರು.
‘ಶಾಲೆ– ಕಾಲೇಜುಗಳ ಸಮಯಕ್ಕೆ ಒಂದೆರಡು ಹೆಚ್ಚುವರಿ ಬಸ್ ಬಿಡುವಂತೆ ಡಿಪೊ ವ್ಯವಸ್ಥಾಪಕರಿಗೆ ಹತ್ತಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೆಲ ಸರ್ಕಾರಿ ಬಸ್ಗಳಲ್ಲಿ ಪಾಸ್ ಹೊಂದಿರುವ ವಿದ್ಯಾರ್ಥಿಗಳನ್ನು ಹತ್ತಿಸುವುದಿಲ್ಲ. ಪಾಸ್ ಪಡೆದ ವಿದ್ಯಾರ್ಥಿಗಳ ಗೋಳು ಕೇಳುವವರಿಲ್ಲ’ ಎಂದು ದೂರಿದರು.
‘ಈ ಬಗ್ಗೆ ಸಂಸದರ ಗಮನಕ್ಕೆ ತಂದರೂ ಉಪಯೋಗವಾಗಿಲ್ಲ. ಡಿಪೊ ವ್ಯವಸ್ಥಾಪಕ ಬಂದು ಸಮಸ್ಯೆಯನ್ನು ಸರಿಪಡಿಸುವವರೆಗೆ ಪ್ರತಿಭಟನೆ ಕೈ ಬಿಡುವುದಿಲ್ಲ’ ಎಂದು ಮಂಗೋಟೆ ರಸ್ತೆಯಲ್ಲಿ ಬಂದ ಎಲ್ಲ ಸರ್ಕಾರಿ ಬಸ್ಗಳನ್ನು ತಡೆದರು.
ಶಿವಮೊಗ್ಗ ಡಿಪೊ ವ್ಯವಸ್ಥಾಪಕ ಮಂಗೋಟೆಗೆ ಭೇಟಿ ನೀಡಿ ಮಂಗಳವಾರ ಸಂಜೆಯಿಂದಲೇ ಹೆಚ್ಚುವರಿ ಸಾರಿಗೆ ಬಸ್ ಕಲ್ಪಿಸುವುದಾಗಿ ಭರವಸೆ ನೀಡಿದ ನಂತರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಮಂಗೋಟೆ ಗ್ರಾಮ ಪಂಚಾಯಿತಿ ಸದಸ್ಯ ರವಿಗೌಡ, ಮಾಳಿಗೆ ಚನ್ನೇಶ್, ಬಸವರಾಜ್, ಕೋಟಿ ನಾಗಪ್ಪ ಇದ್ದರು.