ಶಿವಮೊಗ್ಗ: ನ್ಯಾಯಾಲಯದಲ್ಲಿ ಹೂಡಿರುವ ಮೊಕದ್ದಮೆ ಇತ್ಯರ್ಥ ಆಗುವ ವರೆಗೂ ಶಾಲೆಯಿಂದ ಹೊರಗುಳಿದಿರುವ 18 ವರ್ಷದೊಳಗಿನ ಮಕ್ಕಳ ಸರ್ವೆ ಕಾರ್ಯದಲ್ಲಿ ಭಾಗವಹಿಸುವುದಿಲ್ಲ ಎಂದು ಶಿವಮೊಗ್ಗ ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
‘ಶಾಲೆಯಿಂದ ಹೊರಗೆ ಉಳಿದ ಮಕ್ಕಳ ಸರ್ವೆ ಕಾರ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರನ್ನು ತೊಡಗಿಸಿಕೊಳ್ಳಲು ಕೋರ್ಟ್ ಆದೇಶ ನೀಡಿದೆ ಎಂದು ಹೇಳಲಾಗುತ್ತಿದೆ. ಆದರೆ, ನಮಗೆ ನ್ಯಾಯ ಸಿಗಬೇಕೆಂದು ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿದೆ. ಇದು ಇತ್ಯರ್ಥವಾಗುವವರೆಗೂ ಸರ್ವೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ’ ಎಂದು ಆಗ್ರಹಿಸಿದರು.
‘ಕಾರ್ಯಕರ್ತೆಯರಿಗೆ ಮೊಬೈಲ್ ಹಿಡಿದು ಕೆಲಸ ಮಾಡಲು ಇಲಾಖೆಯಲ್ಲಿ ಹಲವು ಕೆಲಸಗಳು ಇರುವುದರಿಂದ ಅಂಗನವಾಡಿ ಕೇಂದ್ರ ತೆಗೆದು ದಿನಕ್ಕೆ 5 ಮಕ್ಕಳಿಗೆ ಚಟುವಟಿಕೆ ನಡೆಸಬೇಕೆಂದು ಹೈಕೋರ್ಟ್ ಆದೇಶಿಸಿದೆ. ಇತರ ಇಲಾಖೆಗಳ ಹೊರೆಯನ್ನು ತಪ್ಪಿಸಿ ಕೊಳ್ಳಲು ಐಸಿಡಿಎಸ್ ಸೇವೆಯಲ್ಲಿ ಪೂರ್ಣವಾಗಿ ತೊಡಗಿಸಿ ಅನುವು ಮಾಡಿಕೊಳ್ಳಬೇಕೆಂದು ಆದೇಶ ಮಾಡಲಾಗಿದೆ’ ಎಂದು ದೂರಿದರು.
ತಾಲ್ಲೂಕು ಘಟಕದ ಅಧ್ಯಕ್ಷೆ ಬಿ. ಪ್ರೇಮ, ಟಿ.ಎಚ್. ರೇಣುಕಾ, ಭಾರತಿ, ಶಕುಂತಲಾ, ಆಶಾರಾಣಿ, ಭವಾನಿಯಮ್ಮ, ವರಲಕ್ಷ್ಮೀ ಇದ್ದರು.