ಶಿವಮೊಗ್ಗ: ಹೊಸನಗರ ತಾಲ್ಲೂಕಿನಲ್ಲಿ ನೀರು ಮತ್ತು ಮಣ್ಣಿನ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದುಆಗ್ರಹಿಸಿ ರೈತಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿಕಚೇರಿ ಮುಂದೆ ಪ್ರತಿಭಟನೆನಡೆಸಿದರು.
ಹೊಸನಗರ ಪಶ್ಚಿಮಘಟ್ಟ ಕೊಡಚಾದ್ರಿ ಪರ್ವತ ಶ್ರೇಣಿಯಲ್ಲಿದೆ.ಇದು ಲಿಂಗನಮಕ್ಕಿ ಹಿನ್ನೀರಿನ ಪ್ರದೇಶ. ತಾಲ್ಲೂಕಿನಲ್ಲಿ ಸಾವಿರಾರು ಕೃಷಿಕರಿದ್ದಾರೆ. ಇಲ್ಲಿ ಬೀಳುವ ಅತ್ಯಧಿಕ ಮಳೆಯ ಕಾರಣ ಮಣ್ಣು ಸವಕಳಿಯಾಗಿ ಭೂಮಿಯ ಫಲವತ್ತತೆ ನಾಶವಾಗುತ್ತಿದೆ. ಹೆಚ್ಚಿನ ಮಳೆ ಬಿದ್ದರೂ ಬೇಸಿಗೆಯಲ್ಲಿ ಅಂತರ್ಜಲ ಕೊರತೆ ಇದೆ. ಹಾಗಾಗಿ, ಮಣ್ಣು ಹಾಗೂ ನೀರಿನ ಪರೀಕ್ಷಾ ಕೇಂದ್ರದ ಅವಶ್ಯಕತೆ ಇದೆ. ತಕ್ಷಣ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ನೀರು ಮತ್ತು ಮಣ್ಣು ಕೃಷಿಗೆ ಎಷ್ಟು ಯೋಗ್ಯ ಎಂದು ತಿಳಿಯದ ಹೊರತು ವೈಜ್ಞಾನಿಕ ಬೆಳೆ ಸಾಧ್ಯವಿಲ್ಲ. ಭೂ ಸವಕಳಿಯಿಂದ ಫಲವತ್ತತೆ ಕಳೆದುಕೊಂಡಿದೆ. ನೀರು ಮತ್ತು ಮಣ್ಣಿನ ಪರೀಕ್ಷೆಗಾಗಿ ತೀರ್ಥಹಳ್ಳಿ, ಶಿವಮೊಗ್ಗಕ್ಕೆ ತೆರಳಬೇಕು. ರೈತರಿಗೆ ಖರ್ಚು ಬರುತ್ತದೆ. ಇಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿದ್ದಾರೆ. ಆರ್ಥಿಕ ಹೊರೆಯಾಗುತ್ತದೆ ಎಂದುಅಳಲು ತೋಡಿಕೊಂಡರು.
ಒಕ್ಕೂಟದ ಮುಖಂಡರಾದ ಎಂ.ಎನ್.ನಾಗರಾಜಪ್ಪ, ದೀಪಾ, ದಿವಾಕರ್, ಚನ್ನಪ್ಪ, ಯೋಗೀಶ್, ರಂಗಪ್ಪ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.