ಶಿಕಾರಿಪುರ: ತಾಲ್ಲೂಕಿನ ರೈತರ ಸಾವಿರಾರು ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸುವ ಅಂಜನಾಪುರ ಜಲಾಶಯ ಬುಧವಾರ ಭರ್ತಿಯಾಗಿದ್ದು, ಅಚ್ಚುಕಟ್ಟು ರೈತರ ಮೊಗದಲ್ಲಿ ಸಂತಸ ಮೂಡಿದೆ.
ಪ್ರಸ್ತುತ ಜಿಲ್ಲೆಯ ತೀರ್ಥಹಳ್ಳಿ ಹಾಗೂ ಸಾಗರ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಅಂಜನಾಪುರ ಜಲಾಶಯಕ್ಕೆ ನೀರು ಹರಿದು ಬಂದಿದ್ದು, ಜಲಾಶಯ ಭರ್ತಿಯಾಗಿದೆ. ಕೋಡಿ ಮೇಲೆ ನೀರು ಹರಿಯುತ್ತಿದೆ.
ಶಿಕಾರಿಪುರ ಹಾಗೂ ಶಿರಾಳಕೊಪ್ಪ ಪಟ್ಟಣಕ್ಕೆ ಕುಡಿಯುವ ನೀರನ್ನು ಪೈಪ್ಲೈನ್ ಮೂಲಕ ಈ ಜಲಾಶಯದಿಂದ ನೀಡಲಾಗುತ್ತಿದ್ದು, ಪಟ್ಟಣದ ನಾಗರಿಕರು ಸಂತಸಗೊಂಡಿದ್ದಾರೆ. ಕೋಡಿ ಮೇಲೆ ನೀರು ಹರಿದು ಬರುತ್ತಿರುವುದನ್ನು ವೀಕ್ಷಿಸಲು ತಾಲ್ಲೂಕಿನ ಜನ ಜಲಾಶಯದತ್ತ ಮುಖ ಮಾಡಿದ್ದರು.