ಭದ್ರಾವತಿ: ಭದ್ರಾ ಜಲಾಶಯದಿಂದ ಹೊರಬರುತ್ತಿರುವ ನೀರಿನ ಪ್ರಮಾಣ ಹೆಚ್ಚಳವಾದ್ದರಿಂದ ಎರಡನೇ ಬಾರಿ ಹೊಸ ಸೇತುವೆ ರಸ್ತೆ ಮೇಲೆ ನೀರು ಹರಿಯುತ್ತಿದೆ.
ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಸಂಚಾರ ಬಂದ್ ಮಾಡಲಾಗಿದೆ.
ಸತತ ಮಳೆಯಿಂದ ಕಾಚಗೊಂಡನಹಳ್ಳಿ ಗ್ರಾಮದ ಮನೆಯ ಗೋಡೆ ಕುಸಿದು ಭಾಗ್ಯಮ್ಮ (65) ಎಂಬುವವರು ಸಾವನ್ನಪ್ಪಿದ್ದು, ಅವರ ಮಗ ಕೃಷ್ಣಮೂರ್ತಿ ಅವರ ಎರಡು ಕಾಲುಗಳಿಗೆ ಪೆಟ್ಟಾಗಿದೆ. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಾಗ್ಯಮ್ಮ ಅವರ ಅಂತ್ಯಸಂಸ್ಕಾರ ಮಂಗಳವಾರ ಗ್ರಾಮದಲ್ಲಿ ನಡೆಯಿತು. ಈ ವೇಳೆ ಶಾಸಕ ಬಿ.ಕೆ.ಸಂಗಮೇಶ್ವರ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ತಹಶೀಲ್ದಾರ್ ಪ್ರದೀಪ್ ಅವರು ಹಾಜರಿದ್ದು, ಮೃತರ ಕುಟುಂಬಕ್ಕೆ ₹5 ಲಕ್ಷ ಮೊತ್ತದ ಚೆಕ್ ವಿತರಿಸಿದರು.
‘ಕೃಷ್ಣಮೂರ್ತಿ ಅವರ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ತೀವ್ರ ನೀರಿನ ಹರಿವಿನಿಂದ ತೊಂದರೆಗೊಳಗಾದ ಪ್ರದೇಶದ ನಿವಾಸಿಗಳನ್ನು ತಂಗುದಾಣಗಳಿಗೆ ಸ್ಥಳಾಂತರಿಸಿ ಅವರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ತಹಶೀಲ್ದಾರ್ ಪ್ರದೀಪ್ ಹೇಳಿದರು.
ಕವಲಗುಂದಿ ಭಾಗದ 32 ಮನೆಯ ನಿವಾಸಿಗಳು, ಏಕೀನ್ ಸಾ ಕಾಲೊನಿ, ಗೂಂಡೂರಾವ್ ಶೆಡ್, ಬಿ.ಎಚ್. ರಸ್ತೆ ಮೊದಲ ತಿರುವಿನ ನಿವಾಸಿಗಳಿಗೆ ತಂಗಲು ಹಾಗೂ ಊಟ, ತಿಂಡಿ ವ್ಯವಸ್ಥೆ ಮಾಡಲಾಗಿದೆ.