ಶಿವಮೊಗ್ಗ: ‘ರೈಸ್ ದಿ ಬಾರ್’ ಪುಸ್ತಕ ಒಂದು ಕಿರು ಭಗವದ್ಗೀತೆ ಇದ್ದಂತೆ ಎಂದು ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಮಾರುತಿ ಗುರೂಜಿ ಹೇಳಿದರು.
ವೈದ್ಯ ಡಾ. ರಾಹುಲ್ ದೇವರಾಜ್ ರಚಿಸಿರುವ ‘ರೈಸ್ ದಿ ಬಾರ್’ ಪುಸ್ತಕವನ್ನು ಗುರುವಾರ ಬಿಡುಗಡೆಗೊಳಿಸಿ ಅವರು ಆಶೀರ್ವಚನ ನೀಡಿದರು.
‘ರೈಸ್ ದಿ ಬಾರ್ ಒಂದು ಸ್ಫೂರ್ತಿದಾಯಕ ಪುಸ್ತಕ. ಯುವಕರನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿಸಲಾಗಿದೆ. ಹೆಸರೇ ಸೂಚಿಸುವಂತೆ ಜೀವನ ಮೌಲ್ಯಗಳನ್ನು ಹೆಚ್ಚಿಸುವ ಪುಸ್ತಕವಾಗಿದೆ. ಇದಕ್ಕೆ ಕಿರು ಭಗವದ್ಗೀತೆ ಕೃತಿ ಎಂದರೂ ತಪ್ಪಿಲ್ಲ. ಇದೊಂದು ಶ್ರೇಷ್ಠ ಪುಸ್ತಕವಾಗಿ ಹೊರಹೊಮ್ಮಿದೆ’ ಎಂದರು.
‘ಪುಸ್ತಕದಿಂದ ಬಂದ ಲಾಭದಲ್ಲಿ 30 ಕ್ಷಯ ರೋಗಿಗಳನ್ನು ದತ್ತು ಪಡೆದು ಅವರಿಗೆ ಪೌಷ್ಟಿಕ ಆಹಾರ ವಿತರಿಸುವ ಕಾರ್ಯ ಕೈಗೊಳ್ಳಲಾಗಿದೆ’ ಎಂದು ಲೇಖಕ ಡಾ. ರಾಹುಲ್ ದೇವರಾಜ್ ಹೇಳಿದರು.
ಶಾಸಕ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಿದರು. ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್, ಸೂಡಾ ಮಾಜಿ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಬಿಜೆಪಿ ಯುವ ಮುಖಂಡ ಕೆ.ಈ. ಕಾಂತೇಶ್, ಆರ್ಸಿಎಚ್ ಅಧಿಕಾರಿ ಡಾ. ನಾಗರಾಜ್ ನಾಯ್ಕ್, ಮಂಡೇನಕೊಪ್ಪ ದೇವರಾಜ್, ಎಸ್.ಹೇಮಾವತಿ ಇದ್ದರು.