ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ರಾಜಕಾಲುವೆ ಹೂಳು, ತಪ್ಪದ ಗೋಳು

Last Updated 15 ಏಪ್ರಿಲ್ 2022, 4:54 IST
ಅಕ್ಷರ ಗಾತ್ರ

ಶಿವಮೊಗ್ಗ: ಮಹಾನಗರ ಪಾಲಿಕೆಯು ಮಳೆ ಅನಾಹುತ ತಪ್ಪಿಸಲು ಸರ್ವ ಸನ್ನದ್ಧವಾಗಿದೆ ಎಂದು ಹೇಳಿಕೊಂಡಿದೆ. ಆದರೆ, ಮಳೆ ನೀರು ಹರಿಯುವ ಪ್ರಮುಖ ರಾಜಕಾಲುವೆಗಳನ್ನೇ ಸ್ವಚ್ಛ ಮಾಡಿಲ್ಲ.

ವಾರ್ಡ್‌ ನಂ. 15ರ ಹರಿಗೆ ರಾಜಕಾಲುವೆ, ವಾರ್ಡ್‌ ನಂ–16, 19, 22 ಸೇರಿ ಪ್ರಮುಖ ಭಾಗಗಳಲ್ಲಿನ ರಾಜಕಾಲುವೆಗಳಲ್ಲಿ ಹೂಳು ತುಂಬಿದ್ದು, ಮಳೆ ಬಂದರೆ ನೀರು ಸರಾಗವಾಗಿ ಹರಿದುಹೋಗದೆ ಪ್ರವಾಹವುಂಟಾಗುವ ಸಾಧ್ಯತೆ ಹೆಚ್ಚಾಗಿದೆ.

ನಗರದೊಳಗಿನ ರಾಜಕಾಲುವೆಗಳಲ್ಲಿ ಕಳೆ ಬೆಳೆದು, ಹೂಳು, ತ್ಯಾಜ್ಯ ತುಂಬಿಕೊಂಡಿದೆ. ದುರ್ನಾತ ಬೀರುತ್ತಿದೆ. ಸೊಳ್ಳೆ ಕಾಟ ಜೋರಾಗಿದೆ. ಕೊರೊನಾ ಸೋಂಕಿನಿಂದ ಆತಂಕಗೊಂಡಿರುವ ಸಾರ್ವಜನಿಕರಲ್ಲಿ ಈಗ ಇತರೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.

‌ರಾಜಕಾಲುವೆ, ಮೋರಿಗಳ ಸುತ್ತ ವಾಸಿಸುತ್ತಿರುವವರು ನಿತ್ಯ ನರಕ ಅನುಭವಿಸುವಂತಾಗಿದೆ. ಬಹುತೇಕ ಬಡಾವಣೆಗಳ ಕಾಲುವೆಗಳಲ್ಲಿ ಈ ಸಮಸ್ಯೆ ಇದೆ. ಸೊಳ್ಳೆ ಕಾಟವೂ ವಿಪರೀತ.

ಈಗಾಗಲೇ ಒಂದು ಸುತ್ತು ಮಳೆ ಬಂದು ಹೋಗಿದೆ. ಒಂದೆರಡು ತಿಂಗಳಲ್ಲಿ ಮುಂಗಾರು ಆರಂಭವಾಗಲಿದೆ. ಮಳೆಯಿಂದ ಸಂಭವಿಸಬಹುದಾದ ಅನಾಹುತಗಳನ್ನು ತಡೆಯಲು ಇಷ್ಟರಲ್ಲಿ ಮಹಾನಗರ ಪಾಲಿಕೆ ಸಿದ್ಧವಾಗಬೇಕಿತ್ತು. ‌

‘ಮುಂಗಾರು ಪ್ರವೇಶಕ್ಕೂ ಮುನ್ನವೇ ಕಾಮಗಾರಿ ನಡೆದರೆ ಅನಾಹುತ ತಪ್ಪಿಸಬಹುದು. ಪಾಲಿಕೆಗೆ ನಮ್ಮ ಗೋಳು ಕೇಳಿದಂತಿಲ್ಲ. ಕಾಲುವೆಗಳ ಸ್ವಚ್ಛತೆ ಬಗ್ಗೆ ಗಮನಹರಿಸಿಲ್ಲ. ಪ್ರತಿ ವರ್ಷ ಇದೇ ಗೋಳು’ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಗರದ ರಾಜಕಾಲುವೆಗಳಲ್ಲಿ ಹೂಳು, ಕಟ್ಟಡ ಅವಶೇಷ, ತ್ಯಾಜ್ಯ ತುಂಬಿಕೊಂಡಿವೆ. ಗಿಡಗಳು ಬೆಳೆದು ಮಳೆಯ ನೀರು ಸರಾಗವಾಗಿ ಹರಿದುಹೋಗಲು ಜಾಗವೂ ಇಲ್ಲದಂತೆ ಮುಚ್ಚಿಹೋಗಿವೆ. ಸುತ್ತಲಿನ ನಿವಾಸಿಗಳು, ವಾಣಿಜ್ಯ ಮಳಿಗೆ, ಅಂಗಡಿಯವರು ತ್ಯಾಜ್ಯ, ಮದ್ಯದ ಪೌಚ್‌–ಬಾಟಲಿ, ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ಗಳನ್ನು ಎಸೆಯುತ್ತಿದ್ದಾರೆ. ಇನ್ನೊಂದೆಡೆ ಮಾಂಸದ ಅಂಗಡಿಗಳ ತ್ಯಾಜ್ಯವನ್ನು ರಾತ್ರಿ ವೇಳೆ ತಂದು ಹಾಕುತ್ತಿದ್ದಾರೆ. ಇದು ಹಲವಾರು ಸಮಸ್ಯೆಗಳನ್ನು ಸೃಷ್ಟಿಸಿದೆ. ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ವಿವಿಧ ಬಗೆಯ ರೋಗ–ರುಜಿನಗಳ ಉಗಮ ಸ್ಥಾನವಾಗಿದೆ.

ಮಳೆ ನೀರಷ್ಟೇ ಹರಿಯಬೇಕಿದ್ದ ರಾಜಕಾಲುವೆಗಳಿಗೆ ನಗರದ ಹಲವು ಬಡಾವಣೆಗಳ ಒಳಚರಂಡಿ ನೀರು ಬಂದು ಸೇರುತ್ತಿದೆ. ಹೀಗಾಗಿ, ಕೆಲ ರಾಜಕಾಲುವೆಗಳು ಕೊಳಚೆ ಕಾಲುವೆಗಳಾಗಿವೆ.

ರಾಜಕಾಲುವೆ ನಿರ್ವಹಣೆಯನ್ನು ಖಾಸಗಿ ಕಂಪನಿಗಳಿಗೆ ನೀಡಲಾಗಿದೆ. ಸಮಸ್ಯೆಗಳು ಎದುರಾದಾಗ ಪಾಲಿಕೆ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಶರಾವತಿ ನಗರದಿಂದ ಹಾದುಹೋಗುವ ರಾಜಕಾಲುವೆ ಹಾಳಾಗಿದೆ. ಕಾಲುವೆಗಳಲ್ಲಿ ಸರಿಯಾಗಿ ನೀರು ಹರಿಯದ ಕಾರಣ ಬಾಪೂಜಿ ನಗರದ, ಹೊಸನಗರ ಮನೆ ಬಡಾವಣೆಯಂತಹ ತಗ್ಗು ಪ್ರದೇಶದ ಮನೆಗಳು ಸಣ್ಣ ಮಳೆಗೂ ಜಲಾವೃತವಾಗುತ್ತವೆ. ಈ ಸಮಸ್ಯೆ ಹಲವು ವರ್ಷಗಳಿಂದ ಜೀವಂತವಾಗಿದೆ. ಶಾಶ್ವತ ಪರಿಹಾರ ಕಾಣದೆ ಜನರು ಹೈರಾಣಾಗಿದ್ದಾರೆ. ಮಳೆಗಾಲ ಆರಂಭವಾಗುತ್ತಿದ್ದಂತೆ ತಗ್ಗು ಪ್ರದೇಶದ ಜನರು ಪ್ರಾಣ ಭಯದಲ್ಲೇ ಕಾಲ ಕಳೆಯುತ್ತಿದ್ದಾರೆ.

ಪಾಲಿಕೆಯಿಂದ ಅಮೃತ್ ಯೋಜನೆಯಡಿ ರಾಜ ಕಾಲೇಜು ದುರಸ್ತಿ ಕಾರ್ಯ ಮಾಡುತ್ತಿದ್ದಾರೆ. ಬಹಳಷ್ಟು ಕಡೆ ಕಾಮಗಾರಿ ಪೂರ್ಣಗೊಂಡಿಲ್ಲ. ಮಳೆ ನೀರು ಹರಿಯಲು ರಾಜಕಾಲುವೆಗಳನ್ನು ನಿರ್ಮಿಸಿದ್ದರೂ ಹೆಚ್ಚಿನ ಒಳಚರಂಡಿ ಮಾರ್ಗವನ್ನು ರಾಜಕಾಲುವೆಗಳಿಗೆ ಸಂಪರ್ಕಿಸಲಾಗಿದೆ. ಇದರಿಂದ ಸಮಸ್ಯೆ ನಿರ್ಮಾಣವಾಗಿದೆ. ಕೆಲವೆಡೆ ರಾಜಕಾಲುವೆಗಳಲ್ಲಿ ಗಿಡಗಳು ಬೆಳೆದು ಹಾವುಗಳು, ವಿಷ ಜಂತುಗಳು ಸೇರಿಕೊಂಡಿವೆ. ಮಳೆ ಬಂದಾಗ ನೀರು ಹರಿಸಲು ರಾಜಕಾಲುವೆ ಬಳಕೆಯಾಗಬೇಕು ಎಂದು ಪಾಲಿಕೆ ಸದಸ್ಯ ಬಿ.ಎ. ರಮೇಶ್ ಹೆಗ್ಡೆ ಹೇಳುತ್ತಾರೆ.

ಅತ್ತ ಪಾಲಿಕೆಯೂ ನಿರ್ವಹಣೆ ಇಲ್ಲ. ಇತ್ತ ಖಾಸಗಿ ಸಂಸ್ಥೆಯಿಂದಲೂ ನಿರ್ವಹಣೆಯಾಗದೆ ಇದೀಗ

ಮಳೆಗಾಲ ಬಂದಿರುವಾಗ ರಾಜಕಾಲುವೆಗಳಲ್ಲಿ ಕಸ ಹಾಗೂ ಹೂಳು ತುಂಬಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ರಾಜಕಾಲುವೆಗಳ ನಿರ್ವಹಣೆ ಹೊಣೆ ಹೊತ್ತಿದ್ದ ಖಾಸಗಿ ಕಂಪನಿ ಸರ್ಮಪಕವಾಗಿ ನಿರ್ವಹಣೆ ಮಾಡದಿರುವುರಿಂದ ಖಾಸಗಿ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಎರಡು ವರ್ಷಗಳಿಂದ ರಾಜಕಾಲುವೆಯಲ್ಲಿ ನೀರು ಹರಿಯದೇ ಹಲವು ಬಡಾವಣೆಗಳಿಗೆ ನುಗ್ಗಿ ದೊಡ್ಡ ಅನಾಹುತವೇ ಸೃಷ್ಟಿಯಾಗಿತ್ತು. ಆಗ ಮನೆ ಕಳೆದುಕೊಂಡವರಿಗೆ ಇನ್ನೂ ಪರಿಹಾರ ನೀಡಿಲ್ಲ. ಇಷ್ಟೆಲ್ಲ ಆದರೂ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ. ಈಗಾಗಲೇ ಮಳೆಗಾಲ ಆರಂಭದ ಸನಿಹದಲ್ಲಿದ್ದೇವೆ. ಇದಕ್ಕೂ ಮುನ್ನ್ ತುರ್ತಾಗಿ ರಾಜಕಾಲುವೆಗಳು ಸ್ವಚ್ಛವಾಗಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

ಕಾಲುವೆ ಒತ್ತುವರಿ ತೆರವುಗೊಳಿಸಿ
ನಗರದಲ್ಲಿ ಹಲವೆಡೆ ರಾಜ ಕಾಲುವೆಗಳು ಒತ್ತುವರಿಯಾಗಿವೆ. ಅವುಗಳನ್ನು ಮೊದಲು ತೆರವುಗೊಳಿಸಬೇಕು. ರಾಜಕಾಲುವೆಗಳಲ್ಲಿ ತ್ಯಾಜ್ಯ ಎಸೆಯುವವರು ಮತ್ತು ರಾಜಕಾಲುವೆ ನೀರು ಸರಾಗವಾಗಿ ಹರಿದು ಹೋಗುವುದನ್ನು ತಡೆಯಲು ಯತ್ನಿಸುವವರ ಮೇಲೆ ಕ್ರಮ ತೆಗೆದುಕೊಳ್ಳುವ ಅವಕಾಶವಿದೆ. ರಾಜಕಾಲುವೆಗಳಲ್ಲಿ ಕಟ್ಟಡ ತ್ಯಾಜ್ಯ, ಪ್ರಾಣಿ ಮಾಂಸ ತ್ಯಾಜ್ಯ ಸೇರಿ ಯಾವುದೇ ತ್ಯಾಜ್ಯ ಎಸೆದರೂ ಕ್ರಮ ತೆಗೆದುಕೊಳ್ಳುವ ಅವಕಾಶವಿದೆ. ಆದರೆ, ಈ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಯಾಗುತ್ತಿಲ್ಲ ಎನ್ನುತ್ತಾರೆ ಪಾಲಿಕೆ ಸದಸ್ಯ ಬಿ.ಎ. ರಮೇಶ್‌ ಹೆಗ್ಡೆ.

*
ನಗರದಲ್ಲಿ ಎಲ್ಲ ರಾಜಕಾಲುವೆಗಳ ಹೂಳು ತೆಗೆಯಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಮಳೆಗಾಲ ಆರಂಭಕ್ಕೂ ಮೊದಲೇ ಹೂಳು ತೆಗೆಯುವ ಕಾಮಗಾರಿ ಪೂರ್ಣಗೊಳಿಸಲಾಗುವುದು.
-ಮಾಯಣ್ಣ ಗೌಡ, ಪಾಲಿಕೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT